ಮಂಗಳೂರು: ಕಟೀಲು ಮೇಳದ ಖ್ಯಾತ ಮದ್ದಳೆಗಾರ, ಯುವ ಕಲಾವಿದ ಚಿದಾನಂದ ಕುದ್ಕುಳಿ ಯವರು ನಿಧನರಾಗಿದ್ದಾರೆ.

ದಿ. ಮೋಂಟಪ್ಪ ಗೌಡ ಕುದ್ಕುಳಿಯವರ ಪುತ್ರರಾದ ಚಿದಾನಂದರವರು ಮೂಲತ: ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಕುದ್ಕುಳಿಯವರು. ಅವರು ಪ್ರಸ್ತುತ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ನೆಲೆಸಿದ್ದರು. ಆದ್ರೆ ಕಳೆದ ಕೆಲ ದಿನಗಳ ಹಿಂದೆ ಜಾಂಡೀಸ್ ಖಾಯಿಲೆಗೆ ತುತ್ತಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ.
ಇನ್ನು ಕುಮಾರ ಸುಬ್ರಹ್ಮಣ್ಯ ಭಟ್ ವಳಕು೦ಜರವರ ಮಾರ್ಗದರ್ಶನದಲ್ಲಿ ಮದ್ದಳೆ ಕಲಿತು ಕಟೀಲು ಮೇಳಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ ಮೇಳದಲ್ಲಿ ಭಾಗವತರಾಗಿ, ನಾಟ್ಯ ಕಲಾವಿದರಾಗಿಯೂ ತೊಡಗಿಕೊಂಡಿದ್ದರು. ನಂತರ ಅವರು ಮದ್ದಳೆಯಲ್ಲಿ ಹೆಸರುವಾಸಿಯಾಗಿದ್ದರು. ಸತೀಶ್ ಶೆಟ್ಟಿ ಪಟ್ಲರವರಂತಹ ಪ್ರಸಿದ್ಧ ಭಾಗವತರಿಗೆ ಹಿಮ್ಮೇಳದಲ್ಲಿ ಮದ್ದಳೆಯಲ್ಲಿ ಸಾಥ್ ನೀಡುತ್ತಿದ್ದರು.
ಇನ್ನು ಮೃತರು ಅವಿವಾಹಿತರಾಗಿದ್ದು, ಸಹೋದರ ಮಂಗಳೂರಿನಲ್ಲಿ ನೆಲೆಸಿರುವ ರತ್ನಾಕರ ಗೌಡ , ಸಹೋದರಿ ಕುಟುಂಬಸ್ಥರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ