ವಿಟ್ಲ: ವಿಟ್ಲ ದೇವತಾ ಸಮಿತಿ ವತಿಯಿಂದ 51ನೇ ವರ್ಷದ ಸಾರ್ವಜನಿಕ ವಿಟ್ಲ ದಸರಾ ಮಹೋತ್ಸವದ ಸಮಾರೋಪ ಸಮಾರಂಭ ಮತ್ತು ವೈಭವದ ಶೋಭಾಯಾತ್ರೆ ಅಪಾರ ಭಕ್ತ ಸಮೂಹದ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಧಾರ್ಮಿಕ ಮುಖಂಡ ರವೀಶ್ ತಂತ್ರಿ ಕುಂಟಾರು ಅವರು ಮಾತನಾಡಿ ನಾವೆಲ್ಲರೂ ದೇವರ ಮಕ್ಕಳು ಎಂಬ ಚಿಂತನೆ ಇರಬೇಕು. ಮಾನವೀಯ ಮೌಲ್ಯ ಜೀವನದಲ್ಲಿ ಅಳವಡಿಸಬೇಕು. ಸ್ವಾರ್ಥ ಸಹಿತ ಆರಾಧನೆಯನ್ನು ದೇವರು ಸ್ವೀಕರಿಸುವುದಿಲ್ಲ. ದೇಶಕ್ಕಾಗಿ ಪ್ರಾರ್ಥನೆ ನಲ್ಲಿಸಬೇಕು. ಎಲ್ಲರನ್ನೂ ಪ್ರೀತಿಸುವ ಕಾರ್ಯವಾಗಬೇಕು. ಸಮಾಜದಲ್ಲಿ ಶಾಂತಿ ಸಂದೇಶ ಸಾರುವ ಸಮಾಜ ನಿರ್ಮಾಣ ಆಗಬೇಕು. ಸಮಾಜವನ್ನು ಒಡೆಯುವವರನ್ನು ನಾಶಪಡಿಸುವ ಅಗತ್ಯತೆ ಇದೆ ಎಂದರು.
ಬಳಿಕ ಶಿಕ್ಷಕರಾದ ದಾಮೋದರ ಮತ್ತು ವಿಶ್ವನಾಥ ಗೌಡ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಲಯನ್ಸ್ ಕ್ಲಬ್ ಅಧ್ಯಕ್ಷ ಸುದೇಶ್ ಭಂಡಾರಿ ಎರ್ಮೆನಿಲೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷ ಶ್ರೀಕೃಷ್ಣ ಪ್ರಸನ್ನ, ದಿವ್ಯಾಪ್ರಭಾ, ಜೇಸಿಐ ಅಧ್ಯಕ್ಷ ಚಂದ್ರಹಾಸ ಕೊಪ್ಪಳ, ಲಯನ್ಸ್ ಕ್ಲಬ್ ಅಧ್ಯಕ್ಷ ಸುದೇಶ್ ಭಂಡಾರಿ ಎರ್ಮೆನಿಲೆ ಉಪಸ್ಥಿತರಿದ್ದರು.
ವಿಟ್ಲ ದೇವತಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಕಾರ್ಯದರ್ಶಿ ಗೋಕುಲದಾಸ್ ಶೆಣೈ, ಮಂಗೇಶ್ ಭಟ್ ವಿವಿಧ ಜವಾಬ್ದಾರಿ ನಿಭಾಯಿಸಿದರು.
ಬಳಿಕ ಉತ್ಸವ ಸ್ಥಳದಿಂದ ವೈಭವದ ಶೋಭಾಯಾತ್ರೆ ಪ್ರಾರಂಭಗೊಂಡಿದ್ದು, ಬೊಬ್ಬೆಕೇರಿ, ವಿಟ್ಲ ನಾಲ್ಕು ಮಾರ್ಗ, ಮೇಗಿನಪೇಟೆ, ಕಾಶಿಮಠ, ಶಾಲಾ ರಸ್ತೆ ಮೂಲಕ ತೆರಳಿ ಬಳಿಕ ವಿಟ್ಲ ಅನಂತೇಶ್ವರ ದೇವಸ್ಥಾನದಲ್ಲಿ ಜಲಸ್ತಂಭನ ಮಾಡಲಾಯಿತು.