ವಿಟ್ಲ: ವಿಟ್ಲ ಮೂಡ್ನೂರು ಕುಂಡಡ್ಕ ಬಿಲ್ಲವ ಸಂಘದ ಆಶ್ರಯದಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರ, ಪುತ್ತೂರು ಆನಂದಾಶ್ರಮ ಸೇವಾ ಟ್ರಸ್ಟ್ ಸಹಯೋಗದಲ್ಲಿ ವಿಟ್ಲ ಬಿಲ್ಲವ ಸಂಘದ ಬೆಳ್ಳಿ ಹಬ್ಬ ಆಚರಣೆಯ ಪ್ರಯುಕ್ತ ಕುಂಡಡ್ಕ ಬ್ರಹ್ಮಶ್ರೀ ನಾರಾಯಣ ಗುರುದೇವ ಮಂದಿರದಲ್ಲಿ ಶುಕ್ರವಾರ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ ನಡೆಯಿತು.
ಶಿಬಿರವನ್ನು ಪುತ್ತೂರು ಆನಂದಾಶ್ರಮ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ.ಗೌರಿ ಪೈ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಟ್ಲ ಬಿಲ್ಲವ ಸಂಘದ ಬೆಳ್ಳಿ ಹಬ್ಬ ಆಚರಣೆ ಸಮಿತಿ ಅಧ್ಯಕ್ಷ ಡಾ.ಗೀತಪ್ರಕಾಶ್ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕಿನ ಮೂಲ ಆಶಯಕ್ಕೆ ಅನುಗುಣವಾಗಿ ಕುಂಡಡ್ಕ ಬಿಲ್ಲವ ಸಂಘ ಗುರುತರವಾದ ಸೇವಾಕಾರ್ಯವನ್ನು ಪೂರೈಸಿದೆ ಎಂದು ತಿಳಿಸಿದರು.
ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರಿನ ಡಾ.ಅನಿಲ್ ರಾಮಾನುಜಂ ನೇತ್ರಗಳ ಮಹತ್ವ, ನೇತ್ರ ಆರೋಗ್ಯ, ಮುಂಜಾಗ್ರತೆಯ ಬಗ್ಗೆ ಮಾಹಿತಿ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ವಿಟ್ಲ ಮೂಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಪ್ರಕಾಶ್ ನಾಯಕ್, ಕುಂಡಡ್ಕ ಬಿಲ್ಲವ ಸಂಘದ ಅಧ್ಯಕ್ಷ ದೂಮಪ್ಪ ಪೂಜಾರಿ ಪೆರ್ವಾಜೆ, ನಿಕಟಪೂರ್ವ ಅಧ್ಯಕ್ಷ ವಿಠಲ ಪೂಜಾರಿ, ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಸಿ.ಹೆಚ್.ಹರೀಶ್, ವಕೀಲ ಗೋವಿಂದರಾಜ್, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಶ್ರೀನಿಧಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ಬಿ.ಸಿ.ಟ್ರಸ್ಟ್)ಯ ವಲಯ ಮೇಲ್ವಿಚಾರಕಿ ಸರಿತಾ, ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ಯತೀಶ್ ಬೇರಿಕೆ ಭಾಗವಹಿಸಿದ್ದರು. ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕ, ಮಂಗಳೂರು ಕೆ.ಎಂ.ಸಿ ನೇತ್ರ ತಜ್ಞರು ಸಹಕರಿಸಿದರು.
ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿದರು. ವಿಟ್ಲ ಬಿಲ್ಲವ ಸಂಘದ ಬೆಳ್ಳಿ ಹಬ್ಬ ಆಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ವಿಟ್ಲ ವಂದಿಸಿದರು. ಕೆ.ಟಿ.ಆನಂದ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ 145 ಮಂದಿಯ ನೇತ್ರ ತಪಾಸಣೆ ನಡೆಸಲಾಯಿತು. 119 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು. 65 ಫಲಾನುಭವಿಗಳ ರಕ್ತದೊತ್ತಡ,ಮಧುಮೇಹ ಪರೀಕ್ಷೆ ನಡೆಸಲಾಯಿತು. 12 ಮಂದಿ ದೃಷ್ಟಿದೋಷ ರೋಗಿಗಳಿಗೆ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು.