ವಿಟ್ಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಲವು ಮನೆಗಳು ಜಲಾವೃತವಾಗಿದೆ.
ವಿಟ್ಲದ ಅಡ್ಡದ ಬೀದಿ, ಬೊಬ್ಬೆಕೇರಿಯ ವಿದ್ಯಾನಗರದಲ್ಲಿರುವ ಮನೆಗಳು ಜಲಾವೃತಗೊಂಡಿದೆ.
ವಿಟ್ಲದ ಬಾಕಿಮಾರ್ ಗದ್ದೆಯ ಪಕ್ಕದಲ್ಲಿರುವ ಸಾರ್ವಜನಿಕ ಚರಂಡಿಯಲ್ಲಿ ಮೆಸ್ಕಾಂ ಗುತ್ತಿಗೆದಾರರು ಕಾಮಗಾರಿ ನಡೆಸುವ ವೇಳೆ ಪೈಪುಗಳನ್ನು ಚರಂಡಿ ಮೂಲಕ ಅಳವಡಿಸಿದ್ದರಿಂದ ಚರಂಡಿಯಲ್ಲಿ ನೀರು ಹರಿಯದೇ ಪಕ್ಕದ ಮನೆ ಮತ್ತು ಅಂಗಡಿಗಳ ಆವರಣಕ್ಕೆ ನುಗ್ಗಿದೆ. ಅದಲ್ಲದೇ ಅಡ್ಡದ ಬೀದಿ ಕೂಡಾ ಸಂಪೂರ್ಣವಾಗಿ ಜಲಾವೃಗವಾಗಿದೆ.
ವಿಟ್ಲದ ಬೊಬ್ಬೆಕೇರಿ ವಿದ್ಯಾನಗರದಲ್ಲಿರುವ ಮೋನಪ್ಪ ಶೆಟ್ಟಿ, ದಿನೇಶ್ ಪೂಜಾರಿ, ನಾರಾಯಣ ಗೌಡ, ನಾರಾಯಣ ಪೂಜಾರಿ ಮತ್ತು ಇತರ ಕೆಲವುಗಳಿಗೆ ಮಳೆ ನೀರು ನುಗ್ಗಿ ತೊಂದರೆಯಾಗಿದೆ. ಕೆಲವು ಕಡೆಗಳಲ್ಲಿ ಮರಗಳು ಧರೆಗುರುಳಿದ ಘಟನೆಯೂ ನಡೆದಿದೆ.
ವಿಟ್ಲ – ಪುತ್ತೂರು ರಸ್ತೆಯ ಸಿಪಿಸಿಆರ್ ಐ ಪಕ್ಕದಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಂಡಿರುವುದರಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.
ಹೆದ್ದಾರಿಯ ಕಾಮಗಾರಿ ವೇಳೆ ಚರಂಡಿ ಮುಚ್ಚಿದ್ದರಿಂದ ನೀರು ಹರಿಯಲು ವ್ಯವಸ್ಥೆ ಇಲ್ಲದೇ ಪ್ರವಾಹ ಸೃಷ್ಟಿಯಾಗಿದೆ. ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಗೆ ಹೋಗುವ ಒಳದಾರಿ ಕೂಡಾ ಜಲಾವೃತಗೊಂಡು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ವಿಟ್ಲ ಸುತ್ತಮುತ್ತಲ ಕೆಲ ಪ್ರದೇಶಗಳಲ್ಲಿಯೂ ರಸ್ತೆ ಜಲಾವೃತವಾಗಿರುವ ಬಗ್ಗೆ ಹಾಗೂ ಧರೆ ಕುಸಿದು ಬಿದ್ದಿರುವ ಬಗ್ಗೆ ಮಾಹಿತಿ ಲಭಿಸಿದೆ.
ಕೋಳಿ ಫಾರ್ಮ್ ಜಲಾವೃತ:
ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಎಂಬಲ್ಲಿ ಹೊಳೆಯ ಬದಿಯಲ್ಲಿ ಇರುವ ಖಾಸಗಿ ವ್ಯಕ್ತಿಯೋರ್ವರ ಕೋಳಿ ಫಾರ್ಮ್ ಗೆ ನೀರು ನುಗ್ಗಿ ೧ ಸಾವಿರಕ್ಕೂ ಅಧಿಕ ಕೋಳಿಗಳು ಮೃತಪಟ್ಟಿದ್ದು, ಮಾಲಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.