ವಿಟ್ಲ: ವಿಟ್ಲ ವಿಠಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ‘ಕಿಡ್ಸ್ ಫೆಸ್ಟ್’
ಪುಟಾಣಿಗಳ ಸ್ಪರ್ಧೆಯನ್ನು ಶಾಲಾ ಹತ್ತನೇ ತರಗತಿ ವಿದ್ಯಾರ್ಥಿನಿ ಶಾನ್ವಿರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಅಧ್ಯಕ್ಷರಾದ ಎಲ್.ಎನ್.ಕೂಡೂರು ಅವರು ಮಾತನಾಡಿ ಮಕ್ಕಳಿಗೆ ಪೂರಕವಾದ ಸಕಲ ವ್ಯವಸ್ಥೆಗಳು ಶಿಕ್ಷಣ ಸಂಸ್ಥೆಯಲ್ಲಿ ಲಭ್ಯವಿದೆ. ಸೂಕ್ತ ಪ್ರತಿಭೆಗಳ ಅನಾವರಣಕ್ಕೆ ಈ ಶಾಲೆ ವೇದಿಕೆಯಾಗಲಿದೆ ಎಂದರು.
ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲ್ ಜಯರಾಮ ರೈ ಸ್ವಾಗತಿಸಿ, ಪ್ರಾಸ್ತಾವಿಕ
ಮಾತುಗಳನ್ನಾಡಿ ಮಕ್ಕಳನ್ನು ಶ್ರೀಮಂತವಾಗಿಸುವ ಶಿಕ್ಷಣ ಬೇಡ ಅವರನ್ನು ಉತ್ತಮ ವಿದ್ಯಾವಂತರನ್ನಾಗಿ ಮಾಡುವ ಪ್ರಯತ್ನ ಮುಖ್ಯ.
ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಮಾಡಿ ಸಮಾಜದ ಓರ್ವ ಪ್ರಜ್ಞಾವಂತ ಪ್ರಜೆಯನ್ನಾಗಿಸುವ ಪ್ರಯತ್ನ ನಮ್ಮ ಶಿಕ್ಷಣ ಸಂಸ್ಥೆಯ ವೈಶಿಷ್ಟ್ಯವಾಗಿದೆ. ಮುಂದಿನ ದಿನಗಳಲ್ಲಿ ಪ್ರೀ ನರ್ಸರಿ ತರಗತಿಯನ್ನು ಆರಂಭಿಸುತ್ತೇವೆ. ಜೀವನ ಶಿಕ್ಷಣವನ್ನು ನೀಡುವ ಕೆಲಸ ನಮ್ಮಿಂದಾಗಲಿದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಧರ ಶೆಟ್ಟಿ ಡಿ., ಕೋಶಾಧಿಕಾರಿ ಪ್ರಭಾಕರ ಶೆಟ್ಟಿ, ನಿರ್ದೇಶಕರಾದ ಹಸನ್ ವಿಟ್ಲ, ಮೋನಪ್ಪ ಶೆಟ್ಟಿ ದೇವಸ್ಯ, ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು, ವಿಠಲ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ಸಹಶಿಕ್ಷಕ ಬಿ.ಕೆ.ರಮೇಶ್, ವೈಸ್ ಪ್ರಿನ್ಸಿಪಾಲ್ ಜ್ಯೋತಿ ಶೆಣೈ, ಹೇಮಲತಾ, ನಿವೃತ್ತ ಶಿಕ್ಷಕ ಕೃಷ್ಣ ಭಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಮನಸ್ವಿ, ಶ್ರದ್ದಾ, ಶಾನ್ವಿ ಪ್ರಾರ್ಥಿಸಿದರು. ಸಹಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.
………
ಸ್ಪರ್ಧೆಗಳಲ್ಲಿ ಸಂಭ್ರಮಿಸಿದ ಪುಟಾಣಿಗಳು: ಇದೇ ಸಂದರ್ಭದಲ್ಲಿ ಎರಡು ವರ್ಷದಿಂದ ಮೂರುವರೆ ವರ್ಷ ಮತ್ತು ಮೂರುವರೆ ವರ್ಷದ ನಂತರದ ಐದು ವರ್ಷದೊಳಗಿನ ಪುಟಾಣಿಗಳಿಗೆ ಕ್ರಿಯಾತ್ಮಕ ಚಟುವಟಿಕೆಗಳ, ಜಾಣ್ಮೆಯ ಆಕರ್ಷಕ ಆಟೋಟ ಸ್ಪರ್ಧೆಗಳು ನಡೆದವು. ಮಕ್ಕಳೊಂದಿಗೆ ಹೆತ್ತವರು ಸಂಭ್ರಮಿಸಿದರು. ಸಹ ಶಿಕ್ಷಕರಾದ ಹೇಮಲತಾ, ದೈಹಿಕ ಶಿಕ್ಷಣ ಶಿಕ್ಷಕ ಭಾನುಪ್ರಕಾಶ್, ಶಶಿಕಲಾ ಕಾರ್ಯಕ್ರಮ ಸಂಯೋಜಿಸಿದರು.