ಬಂಟ್ವಾಳ: ಪೆರಿಯಪಾದೆ ಶ್ರೀ ದುಗಲಾಯ ಮತ್ತು ಕೊಡಮಣಿತ್ತಾಯ ಪರಿವಾರ ದೈವಗಳ ದೈವಸ್ಥಾನದ ಗ್ರಾಮದೈವಗಳ ನೂತನ(ಪ್ರಾಸಾದಗಳಿಗೆ) ಗರ್ಭಗುಡಿಗಳ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಎ. ೨೫ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಆಶೀರ್ವಚನ ನೀಡಿ, ಶಿಲ್ಪಶಾಸ್ತ್ರ, ತಂತ್ರಶಾಸ್ತ್ರ ಮೂಲಕ ದೇವಸ್ಥಾನ, ದೈವಸ್ಥಾನ ನಿರ್ಮಾಣಗೊಳ್ಳುತ್ತಿದ್ದು, ಇಲ್ಲಿ ಹಲವು ಸವಾಲುಗಳಿರುತ್ತವೆ. ಸೂಕ್ಷ್ಮವಾದ ಶಕ್ತಿಗಳು ಅಲ್ಲಿ ಶಾಶ್ವತ ಸ್ಥಾನ ಪಡೆಯಲಿದ್ದು, ಈ ಮೂಲಕ ಧರ್ಮ, ಪ್ರಕೃತಿಯ ರಕ್ಷಣೆಯೂ ಆಗಬೇಕಿದೆ ಎಂದರು.
ತುಳು ವಿದ್ವಾಂಸ ಕೆ.ಕೆ.ಪೇಜಾವರ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಕ್ಷೇತ್ರದ ಮೊಕ್ತೇಸರ ರಘು ಶೆಟ್ಟಿ ಪಡ್ಡಾಯೂರುಗುತ್ತು ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ ಕಾರಂತ, ವೇ|ಮೂ| ಗಣಪತಿ ಮುಚ್ಚಿನ್ನಾಯ, ಪುರಸಭಾ ಹಿರಿಯ ಸದಸ್ಯ ಗೋವಿಂದ ಪ್ರಭು, ಮುನ್ನಲಾಯಿಗುತ್ತು ಮೋಹನದಾಸ ಶೆಟ್ಟಿ, ನಾಗೇಶ್ ಪೂಜಾರಿ ಉಜಿರಾಡಿಗುತ್ತು, ದಿನೇಶ್ ಪೂಜಾರಿ ಕುಜುಂಬೊಟ್ಟುಗುತ್ತು, ಶ್ರೀ ದುಗಲಾಯ ಕೊಡಮಣಿತ್ತಾಯ ಸೇವಾ ಟ್ರಸ್ಟ್ ಅಧ್ಯಕ್ಷ ದಯಾನಂದ ಶೆಟ್ಟಿ ಮುನ್ನಲಾಯಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್, ಕಾರ್ಯಾಧ್ಯಕ್ಷ ರವೀಂದ್ರ ಟಿ.ಸಿ. ಉಪಸ್ಥಿತರಿದ್ದರು.
ಎ. ೨೪ರ ರಾತ್ರಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಶ್ರೀ ದುಗಲಾಯ ಕೊಡಮಣಿತ್ತಾಯ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಧನಂಜಯ ಶೆಟ್ಟಿ ಸರಪಾಡಿ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.