ಬಂಟ್ವಾಳ : ಎಲ್ಲಿಯ ವಂಡರ್ ಲಾ..? ಎಲ್ಲಿಯ ಕಡೇಶ್ವಾಲ್ಯ…? ಒಂದು ರಾಜ್ಯ ರಾಜಧಾನಿಯಲ್ಲಿದ್ದರೆ, ಇನ್ನೊಂದು ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿದೆ. ಆದರೆ ಬೆಂಗಳೂರಿನ ವಂಡರ್ ಲಾ ಹಾಲಿಡೇಸ್ ಸಂಸ್ಥೆ ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್ ಆರ್) ಅನುದಾನ ಬಳಸಿ ಸುಸಜ್ಜಿತ ಶೌಚಾಲಯವನ್ನು ಕಟ್ಟಿಕೊಡುವ ಮೂಲಕ ಕಡೇಶಿವಾಲಯದ ಸರ್ಕಾರಿ ಹಿ.ಪ್ರಾ.ಶಾಲೆಯ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಿ ಗಮನಸೆಳೆದಿದೆ.
1935 ರಲ್ಲಿ ಆರಂಭಗೊಂಡಿರುವ ಕಡೇಶಿವಾಲಯ ಸರ್ಕಾರಿ ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ಸಂಖ್ಯೆಗೇನೂ ಕಡಿಮೆ ಇರಲಿಲ್ಲ. ಆದರೆ ಇಲ್ಲಿ ಎರಡೇ ಶೌಚಾಲಯಗಳಿದ್ದುದು ಮಕ್ಕಳಿಗೆ ಮಾತ್ರವಲ್ಲದೆ ಶಿಕ್ಷಕರಿಗೂ ಸಮಸ್ಯೆಯಾಗಿತ್ತು.
ಈ ನಡುವೆ ಶಾಲೆಯ ಸುಂದರ ತೋಟದ ಹಿನ್ನೆಲೆಯಲ್ಲಿ ವಂಡರ್ ಲಾ ಶಾಲೆಗೆ ಪರಿಸರ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು, ಶಾಲಾ ಭೇಟಿ ಸಂದರ್ಭದಲ್ಲಿ ಶಾಲೆಯ ಶೌಚಾಲಯ ಕೊರತೆಯನ್ನು ಗಮನಿಸಿದ ವಂಡರ್ ಲಾ ಸಂಸ್ಥೆಯ ಅಧಿಕಾರಿಗಳು ಸಿಎಸ್ ಆರ್ ಅನುದಾನವನ್ನು ಒದಗಿಸಿ ಬಾಲಕ ಬಾಲಕಿಯರಿಗೆ ಪ್ರತ್ಯೇಕ ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇದರಿಂದಾಗಿ ಶಾಲೆಯ ಬಾಲಕ, ಬಾಲಕಿಯರು ಸೇರಿದಂತೆ 200 ಕ್ಕಿಂತಲೂ ಹೆಚ್ಚು ಮಕ್ಕಳಿಗೆ ಅನುಕೂಲವಾಗಿದೆ. ಇದರ ಜೊತೆಯಲ್ಲಿಯೇ ಶಾಲೆಗೆ ಜಿ.ಪಂ.ಹಾಗೂ ಗ್ರಾ.ಪಂ.ಅನುದಾನದ ನೆರವಿನಿಂದ ಹೆಚ್ಚುವರಿ ಶೌಚಾಲಯಗಳ ನಿರ್ಮಾಣಗೊಂಡಿದ್ದು, ಶಾಲೆಯ ಬಹುದೊಡ್ಡ ಕೊರತೆ ನೀಗಿದಂತಾಗಿದೆ.
ಕೋವಿಡ್ ನಿಯಮಾವಳಿಗಳ ಪಾಲನೆಯೊಂದಿಗೆ ಶೌಚಾಲಯಗಳ ಉದ್ಘಾಟನಾ ಕಾರ್ಯಕ್ರಮ ಗ್ರಾಮಪಂಚಾಯತ್ ಅಧ್ಯಕ್ಷ ಸುರೇಶ್ ಬನಾರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ವಂಡರ್ ಲಾ ಸಂಸ್ಥೆಯ ಮಂಗಳೂರು ಮ್ಯಾನೇಜರ್ ಸಂತೋಷ್, ಜಿ.ಪಂ.ನಿಕಟಪೂರ್ವ ಸದಸ್ಯೆ ಕಮಲಾಕ್ಷಿ ಪೂಜಾರಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ರಮೇಶ್ ಆಚಾರ್ಯ, ಶಾಲಾಮುಖ್ಯಶಿಕ್ಷಕಿ ಉಮಾವತಿ, ಆಂಗ್ಲಮಾಧ್ಯಮ ಶಾಲೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಾಧವ ರೈ, ಸಿಆರ್ ಪಿ ಸುಧಾಕರ ಭಟ್, ಗುತ್ತಿಗೆದಾರ ದಯಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.