ಬಂಟ್ವಾಳ: ಅಸೌಖ್ಯದಿಂದ ಬಳಲುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಈ ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದ್ದು ಸಂಶಯಾಸ್ಪದ ಸಾವು ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಸಜೀಪ ಮೂಡ ಗ್ರಾಮದ ಬೇಂಕ್ಯ ನಿವಾಸಿ ಅವಿವಾಹಿತ ಹರೀಶ್ ಪೂಜಾರಿ (42) ಮೃತಪಟ್ಟ ವ್ಯಕ್ತಿ.
ಕಳೆದ ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹರೀಶ್ ಪೂಜಾರಿ ಅವರು ಮನೆಯಲ್ಲಿ ಮಲಗಿದ್ದರು.
ಆದರೆ ಇವರ ಅರೋಗ್ಯ ತೀರಾ ಹದಗೆಟ್ಟ ಕಾರಣ ಮನೆಯವರು ಆಸ್ಪತ್ರೆಗೆ ಸಾಗಿಸಿದರಾದರೂ ಆದಾಗಲೇ ಆತ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ.
ಕೊಲೆ ಶಂಕೆ
ಹರೀಶ್ ಪೂಜಾರಿ ಸಾವಿನ ಬಗ್ಗೆ ಮನೆಯವರಿಗೆ ಸಂಶಯವಿದ್ದು ಈತನ ಕೊಲೆ ನಡೆದ ಬಗ್ಗೆ ಸಂಶಯವನ್ನು ವ್ಯಕ್ತಪಡಿಸಿ ಸೂಕ್ತವಾದ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡುವಂತೆ ಮೃತನ ತಮ್ಮ ಪ್ರಕಾಶ್ ಪೂಜಾರಿ ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈತ ಗ್ರಾಮದಲ್ಲಿ ಕಳ್ಳತನ ಮಾಡುತ್ತಿದ್ದ ಎಂಬ ಆರೋಪಗಳು ಕೇಳಿ ಬಂದಿದ್ದು, ಅಸಹಜ ಸಾವು ಅನೇಕ ಗೊಂದಲಗಳಿಗೆ ಕಾರಣವಾಗಿದೆ.
ಹರೀಶ್ ಪೂಜಾರಿ ಅವರ ಮೃತದೇಹ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿದ್ದು, ಆಸ್ಪತ್ರೆಗೆ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಬೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಪ್ರಾರಂಭಿಸಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಬಗ್ಗೆ ಸ್ಪಷ್ಟ ವಾದ ಮಾಹಿತಿ ಲಭ್ಯವಾಗಲಿದೆ. ಒಂದು ವೇಳೆ ಹರೀಶ್ ಪೂಜಾರಿ ಎಂಬಾತನ ಕೊಲೆಯಾಗಿದ್ದರೆ ಯಾವ ಕಾರಣಕ್ಕಾಗಿ ಕೊಲೆ ನಡೆಸಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಎಲ್ಲವೂ ಪೋಲೀಸ್ ತನಿಖೆಯ ಬಳಿಕವೇ ಹೊರಬರಲಿದೆ.