ಬಂಟ್ವಾಳ: ಲೊರೆಟ್ಟೋ ಬಾರಿಕ್ಕಾಡಿನಲ್ಲಿ ಕೆಂಪುಕಲ್ಲಿನ ಕೋರೆಯ ಹೊಂಡಕ್ಕೆ ಬಿದ್ದು ೧೨ ವರ್ಷದ ಬಾಲಕ ಮೃತಪಟ್ಟ ಹಿನ್ನೆಲೆಯಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಕೋರೆಯನ್ನು ನಿಯಮ ಮೀರಿ ಹಾಗೂ ಸರಕಾರಿ ಸ್ಥಳದಲ್ಲಿ ನಡೆಸಲಾಗಿದೆಯೇ ಎಂದು ಪರಿಶೀಲನೆ ನಡೆದಿದೆ. ಆದರೆ ಭೇಟಿಯ ವೇಳೆ ನಿಯಮ ಮೀರಿರುವ ಯಾವುದೇ ವಿಚಾರಗಳು ಕಂಡುಬಂದಿಲ್ಲ.
ಕಾನೂನು ಪ್ರಕಾರ ಅನುಮತಿ ಪಡೆದು ಕೋರೆ ನಡೆಸಲಾಗಿದ್ದು, ೨ ತೆಂಗಳ ಹಿಂದೆ ಕಲ್ಲು ತೆಗೆಯುವುದನ್ನು ನಿಲ್ಲಿಸಿದ್ದಾರೆ. ಜತೆಗೆ ಅವಧಿ ಮುಗಿದ ಕಾರಣಕ್ಕೆ ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಕೋರೆಗೆ ಮುಳ್ಳಿನ ಬೇಲಿಯ ಜತೆಗೆ ಸ್ಥಳದಲ್ಲಿ ಎಚ್ಚರಿಕೆಯ ಫಲಕವನ್ನೂ ಹಾಕಿರುವುದು ಕಂಡುಬಂದಿದೆ. ಮಕ್ಕಳು ಆಟವಾಡಲು ಹೋಗಿ ಇಂತಹ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ಎವಿ ಅಮೃತಾಂಶ್, ಗಣಿ ಇಲಾಖೆಯ ಮಾದೇಶ್, ಅಮ್ಟಾಡಿ ಪಂಚಾಯತ್ ಪಿಡಿಒ ರವಿ ಬಿ. ಜತೆಗಿದ್ದರು.