ಪುತ್ತೂರು: ಆಟವಾಡುವಾಗ ಆಕಸ್ಮಿಕವಾಗಿ ಇಲಿ ಪಾಷಾಣ ಸೇವಿಸಿ ಎರಡೂವರೆ ವರ್ಷದ ಕಂದಮ್ಮ ಮೃತಪಟ್ಟ ಹೃದಯವಿದ್ರಾವಕ ಘಟನೆ ಪುತ್ತೂರು ತಾಲ್ಲೂಕಿನಲ್ಲಿ ನಡೆದಿದೆ.
ಪುತ್ತೂರು ತಾಲ್ಲೂಕಿನ ಬಜತ್ತೂರು ಗ್ರಾಮದ ಕೆಮ್ಮಾರದಲ್ಲಿ ವಾಸವಿರುವ ನಿವೃತ್ತ ಸೈನಿಕ ಸೈಜು ಮತ್ತು ದೀಪ್ತಿ ದಂಪತಿಯ ಪುತ್ರಿ ಶ್ರೇಯಾ ಮೃತಪಟ್ಟ ಮಗು ಎಂದು ಹೇಳಲಾಗಿದೆ. ಮನೆಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಇಲಿ ಪಾಷಾಣದ ಟ್ಯೂಬ್ ಅನ್ನು ನಾಯಿಗೂಡಿನ ಬಳಿ ಇಡಲಾಗಿದೆ. ಆಟವಾಡುತ್ತಾ ಅಲ್ಲಿಗೆ ಬಂದ ಮಗು ಇಲಿ ಪಾಷಾಣ ತಿಂದಿದೆ. ಕೆಲಸದಲ್ಲಿ ಮಗ್ನರಾಗಿದ್ದ ಮನೆಯವರು ಇದನ್ನು ಗಮನಿಸಿರಲಿಲ್ಲ. ತೀವ್ರ ಅಸ್ವಸ್ಥರಾಗಿದ್ದ ಮಗುವನ್ನು ತಕ್ಷಣವೇ ಉಪ್ಪಿನಂಗಡಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ಹೇಳಲಾಗಿದೆ.