ಬಂಟ್ವಾಳ: ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಆಹಾರ ಇಲ್ಲದೆ ಸಂಕಷ್ಟದಲ್ಲಿರುವ ಬಿ.ಸಿ.ರೋಡ್ ಮತ್ತು ಬಂಟ್ವಾಳ ಪರಿಸರದ ವಿವಿಧೆಡೆ ಇರುವ ನಿರ್ಗತಿಕರಿಗೆ ಬಂಟ್ವಾಳ ಪುರಸಭೆಯ ಹಿರಿಯ ಸದಸ್ಯ ಗೋವಿಂದ ಪ್ರಭು ಅವರ ನೇತೃತ್ವದಲ್ಲಿ ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ಥಾನದ ವತಿಯಿಂದ ಊಟ ವಿತರಿಸಿದರು.
ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಸಾದದಂತೆ ಬಿ.ಸಿ.ರೋಡ್, ಕೈಕಂಬ, ಬಂಟ್ವಾಳದ ಪರಿಸರದಲ್ಲಿ ಬಸ್ಸು ನಿಲ್ದಾಣ ಸಹಿತ ವಿವಿಧೆಡೆ ಇರುವ ನಿರ್ಗತಿಕರಿಗೆ ಗೋವಿಂದ ಪ್ರಭು ಅವರು ಮತ್ತು ಅವರ ತಂಡ ವಿತರಿಸಿತು.
ದೇವಸ್ಥಾನದಲ್ಲಿ ಊಟ ತಯಾರಿಸಿ ಗೋವಿಂದ ಪ್ರಭು ಅವರು ತನ್ನ ಕಾರಿನಲ್ಲಿ ತಂದು ಊಟ ವಿತರಿಸುತ್ತಿದ್ದಾರೆ. ಅವರ ಜೊತೆ ಅವರ ಬಳಗ ಕೈ ಜೋಡಿಸಿದೆ.
ಕೊರೋನ ನಿಯಂತ್ರಣಕ್ಕೆ ಕರ್ಫ್ಯೂ ಅನಿವಾರ್ಯ. ಕರ್ಫ್ಯೂ ಸಮಯದಲ್ಲಿ ರಸ್ತೆಬದಿ, ಬಸ್ ನಿಲ್ದಾಣದಲ್ಲಿ ಇರುವ ನಿರ್ಗತಿಕರು ಅನ್ನ ನೀರಿಲ್ಲದೆ ಹಸಿದು ಇರುತ್ತಾರೆ. ಯಾರೂ ಹಸಿದು ಇರದಂತೆ ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ತಾನದಿಂದ ಊಟ ತಯಾರಿಸಿ ನಿರ್ಗತಿಕರಿಗೆ ವಿತರಿಸಲಾಗುತ್ತಿದೆ. ದೇವಸ್ಥಾನದ ಪ್ರಸಾದ ಎಂಬ ನೆಲೆಯಲ್ಲಿ ಈ ಕೆಲಸ ಮಾಡಲಾಗುತ್ತಿದೆ ಎಂದು ಗೋವಿಂದ ಪ್ರಭು ಮತ್ತು ಅವರ ತಂಡ ತಮ್ಮ ಕಾರ್ಯದ ಬಗ್ಗೆ ಹೇಳಿದೆ.