ಪುಂಜಾಲಕಟ್ಟೆ ಎ.5: ಬಂಟ್ವಾಳ ತಾಲೂಕು ಸಿದ್ಧಕಟ್ಟೆ ಕೋರ್ಯಾರು ಶ್ರೀ ದುರ್ಗಾಮಹಮ್ಮಾಯಿ ದೇವಸ್ಥಾನದಲ್ಲಿ ಹೋಳಿ ಹಬ್ಬದ ವರ್ಷಾವಽ ಮಹೋತ್ಸವ ವಿಶಿಷ್ಠವಾಗಿ ಮೇಳೈಸುವುದರೊಂದಿಗೆ ಸೋಮವಾರ ಸಂಪನ್ನಗೊಂಡಿತು.
ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರ.ಅರ್ಚಕ ರಾಮಚಂದ್ರ ಭಟ್ ದೈಲಾ ಅವರು ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು. ಕುಡುಬಿ ಸಮುದಾಯದವರು ಸಂಪ್ರದಾಯ ಪ್ರಕಾರ ಬೆಳಗ್ಗೆಯಿಂದ ಸಂಜೆವರೆಗೆ ದೇವಸ್ಥಾನದಲ್ಲಿ ಕುಡುಬಿಗಳ ವಿಶಿಷ್ಠ ಮರಾಠಿ ಭಾಷೆಯಲ್ಲಿ ರಾಮಾಯಣ,ಮಹಾಭಾರತ ಹಾಗೂ ಪುರಾಣ ಕಥೆಗಳನ್ನು ಹಾಡುತ್ತಾ ನೃತ್ಯ ಮಾಡಿದರು. ತಲೆಗೆ ರುಮಾಲು (ಕೆಲವರು ಪೇಟ ಕಟ್ಟುತ್ತಾರೆ),ಅಬ್ಬಲ್ಲಿಗೆ ಹೂವಿನ ಮಾಲೆ, ಮಲ್ಲಿಗೆ ಹಾಕಿಕೊಂಡು ಮಣ್ಣಿನಿಂದ ತಯಾರಿಸಿದ ವಿಶೇಷ ವಾದ್ಯ ಗುಮ್ಮಟೆಯನ್ನು ಬಡಿಯುತ್ತಾ ನೃತ್ಯ ಪ್ರದರ್ಶಿಸಿದರು. ರಾಮ-ಸೀತೆ,ಹುಲಿ,ಕರಡಿ, ಸಿಂಹ, ಹಂದಿ ಭೇಟೆ ವೇಷಗಳ ನೃತ್ಯ ಪ್ರದರ್ಶನ, ವಿವಿಧ ತಂಡದವರ ಗುಮ್ಮಟೆ ಮತ್ತು ಕೋಲಾಟ ಪ್ರದರ್ಶನ ನಡೆಯಿತು. ಇದರಲ್ಲಿ ಶ್ರೀ ರಾಮ ಸೀತಾ ಸ್ವಯಂವರ ಹಾಗೂ ಕೋಲಾಟದಲ್ಲಿ ಸೇತುವೆ ಕಟ್ಟುವುದು ವಿಶಿಷ್ಠವಾಗಿತ್ತು. ಬಳಿಕ ಅನ್ನ ಸಂತರ್ಪಣೆ ನಡೆಯಿತು.
ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಸಿದ್ದಕಟ್ಟೆ ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ, ಗುರಿಕಾರರರಾದ ಗೊಪಾಲ ಗೌಡ, ಓಬಯ್ಯ ಗೌಡ ಕುಕ್ಕೇಡಿ ಮತ್ತಿತರರು ಭಾಗವಹಿಸಿದ್ದರು.