ಬಂಟ್ವಾಳ: ಕೇಂದ್ರ ಮತ್ತು ರಾಜ್ಯ ಸರಕಾರದ ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ರೈತ ಸಂಘಟನೆಗಳ ಒಕ್ಕೂಟದಿಂದ ಬಿ.ಸಿ.ರೋಡಿನ ಮೇಲ್ಸೇತುವೆಯಡಿಯಲ್ಲಿ ಶುಕ್ರವಾರ ಪ್ರತಿಭಟನಾ ಸಭೆ ನಡೆಯಿತು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ ವಿರೋಧಿ ನೀತಿಗಳನ್ನು ಅಳವಡಿಸುತ್ತಿದ್ದು ಕೃಷಿ ಕ್ಷೇತ್ರವನ್ನು ಬಂಡವಾಳ ಶಾಹಿಗಳ ಹಿಡಿತಕ್ಕೆ ನೀಡುವ ಒಪ್ಪಿಸುವ ಪ್ರಯತ್ನ ಮಾಡುತ್ತಿದೆ. ಅನ್ನದಾತರ ರಕ್ಷಣೆ ಮಾಡಬೇಕಾದ ಸರಕಾರಗಳು ಬಂಡವಾಳ ಶಾಹಿಗಳ ಹಿತ ಕಾಪಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಾಲ್ಕು ತಿಂಗಳಿಂದ ದೆಹಲಿಯ ಹೊರ ವಲಯದಲ್ಲಿ ರೈತರು ಧರಣಿ ಕುಳಿತಿದ್ದಾರೆ. ಸಿನಿಮಾ ನಟಿ ಗರ್ಭಿಣಿ ಆದರೆ ಕರೆ ಮಾಡಿ ಆರೋಗ್ಯ ವಿಚಾರಿಸುವ ಪ್ರಧಾನಿ ಮೋದಿಗೆ ರೈತರ ಸಮಸ್ಯೆ ಆಲಿಸುವ ಸೌಜನ್ಯ ಇಲ್ಲ. ರೈತರ ಜಪ ಮಾಡುತ್ತಾ ಅಧಿಕಾರಕ್ಕೆ ಬಂದವರು ರೈತರಿಗೆ ಮರಣ ಶಾಸನವಾಗ ಕಾನೂನು ಜಾರಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ನಾಯಕರಾದ ರವಿಕಿರಣ್ ಪುಣಚ, ಓಸ್ವಾಲ್ಡ್ ಫೆರ್ನಾಂಡೀಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ, ಯಾದವ ಶೆಟ್ಟಿ, ಕೃಷ್ಣಪ್ಪ ಸಾಲಿಯಾನ್, ರಾಮಣ್ಣ ವಿಟ್ಲ,ವಸಂತ ಆಚಾರಿ, ತುಳಸೀದಾಸ್, ಪದ್ಮಾವತಿ ಶೆಟ್ಟಿ, ಸನ್ನಿ ಡಿಸೋಜ, ರೋಯ್ ಕಾರ್ಲೊ, ಬೆನಿಟ್ಟಾ ಡೆಸಾ, ವಾಸುದೇವ ಉಚ್ಚಿಲ, ಲೋಕಯ್ಯ, ಸದಾಶಿವ ದಾಸ್, ಅಲ್ತಾಫ್ ತುಂಬೆ, ಜಯಂತ್ ನಾಯ್ಕ್, ಶಾಹುಲ್ ಹಮೀದ್, ಹಾರೂನ್ ರಶೀದ್, ಆಲ್ವಿನ್ ಲೊಬೊ, ಪ್ರಭಾಕರ ದೈವಗುಡ್ಡೆ, ಕನ್ಸೆಪ್ಟ ಡೆಸ ಮೊದಲಾದವರು ಉಪಸ್ಥಿತರಿದ್ದರು.