Wednesday, October 18, 2023

*ನೀನೆ ಸಾಕು*

Must read

ನನ್ನ ಎದೆಯ ನೂರು ಮಾತು

ಹೇಳದೇನೆ ಉಳಿದಿವೆ

ಬೇಗುದಿಯ ಬೆಂದೊಡಲಲಿ

ದಿನಗಳೆಲ್ಲ ಕಳೆದಿವೆ

 

ಬಾರದಿರುವ ಬಯಕೆಯೆಲ್ಲ

ತುಂಬಿ ನಿಂತೆ ಎದೆಯಲಿ

ನಿನ್ನ ನೋಟ ತಾಗಿಸಿಯೆ

ಹೊಡೆದೆ ನನ್ನ ಗದೆಯಲಿ

 

ಕಳ್ಳ ಕೃಷ್ಣನೆಂಬ ನುಡಿಯ

ಕೇಳಿ ತನುವು ಸೊರಗಿತು

ತುಂಟನಲ್ಲ ಧೂರ್ತನವನು

ಎನಲು ಮನವು ಕೊರಗಿತು

 

ರಾಧೆ ಒಡಲ ದನಿಗೆ ನೀನೆ

ತಾಳ ಮೇಳವಾದೆಯು

ಇರುವನಕ ನಿನ್ನ ಒಲವು

ಇಲ್ಲ ಎನಗೆ ಬಾಧೆಯು

 

ದೇವ ನೀನು ಎಂದ ಕೆಲರು

ಗುಡಿಯ ಕಟ್ಟಿ ಕುಣಿವರು

ಬೆರೆಯದೇನೆ ಮನದಿ ಹಲರು

ಹೆಜ್ಜೆ ಕುಟ್ಟಿ ದಣಿವರು

ಯಾರ ಮಾತು ಬೇಡ ನನಗೆ

ಸಾಕು ನಿನ್ನ ಒಲುಮೆಯು

ಗಾಳಿ ಹಾಕು ಬಿಡದೆ ನೀನು

ಕಾಯದಿರಲಿ ಕುಲುಮೆಯು

 

#ನೀ.ಶ್ರೀಶೈಲ ಹುಲ್ಲೂರು

More articles

Latest article