ಆರ್.ಎನ್. ಶೆಟ್ಟಿಯವರ ನಿಧನದ ವಾರ್ತೆಯನ್ನು ತಿಳಿದು ವಿಷಾದವಾಯಿತು. ಅವರು ನಾನು ಮೆಚ್ಚಿದ ವ್ಯಕ್ತಿ. ಸಂಪಾದನೆ ಎರಡು ಕೈಯಲ್ಲಿ ಮಾಡಿ ನಾಲ್ಕು ಕೈಯಲ್ಲಿ ದಾನ ಮಾಡು ಎಂಬ ಮಾತಿನನ್ವಯದಂತೆ ಶೈಕ್ಷಣಿಕವಾಗಿ ಯಾವುದೇ ಪದವಿ ಪಡೆಯದಿದ್ದರೂ ಪ್ರಸಿದ್ಧರಾದ ಅವರು ಆಡಳಿತ ತರಬೇತಿದಾರರಿಗೆ ಶಿಕ್ಷಣ ಕೊಡುವಷ್ಟು ತಜ್ಞರಾಗಿದ್ದರು. ಅಂತೆಯೇ ಮುರ್ಡೇಶ್ವರ ಕ್ಷೇತ್ರವನ್ನು ಏಕಾಗ್ರತೆಯಿಂದ ಅಭಿವೃದ್ಧಿ ಪಡಿಸಿ ಎಲ್ಲರೂ ಒಮ್ಮೆ ವೀಕ್ಷಿಸಲೇ ಬೇಕಾದ ಪವಿತ್ರ ಕ್ಷೇತ್ರವಾಗಿ ಪರಿವರ್ತಿಸಿದರು.
ವ್ಯವಹಾರ, ಧಾರ್ಮಿಕತೆ ಎಲ್ಲಾ ರಂಗದಲ್ಲಿಯೂ ಯಶಸ್ಸು ಪಡೆದು ಮಾದರಿ ಅನ್ನಿಸಿಕೊಂಡಿದ್ದರು. ದಾನದಲ್ಲಿಯೂ ಎತ್ತಿದ ಕೈ. ಆದರೆ ಹೆಚ್ಚು ಪ್ರಚಾರ ಬಯಸದೆ ದಾನವನ್ನು ಮಾಡಿ ತಾನು ದಾನ ನೀಡಿದ ಕಾರ್ಯಗಳು ಅಥವಾ ಕಟ್ಟಡಗಳು ವ್ಯವಸ್ಥಿತವಾಗಿ ರೂಪುಗೊಂಡು ನಡೆಸುವಂತೆ ಮಾರ್ಗದರ್ಶನ ನೀಡುತ್ತಿದ್ದರು. ಆದರ್ಶ ಜೀವನವನ್ನು ನಡೆಸಿದ ಶ್ರೀ ಶೆಟ್ಟಿಯವರ ಜೀವನ ಇತರರಿಗೆ ಮಾದರಿ ಆಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ.
ಅವರ ಅಗಲುವಿಕೆಯಿಂದ ಕುಟುಂಬ ವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ಮುರ್ಡೇಶ್ವರ ಕರುಣಿಸಲೆಂದು ಪ್ರಾರ್ಥಿಸುತ್ತೇನೆ.
(ಡಿ. ವೀರೇಂದ್ರ ಹೆಗ್ಗಡೆಯವರು)