ಉಡುಪಿ: ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ನ 7ನೇ ತರಗತಿ ವಿದ್ಯಾರ್ಥಿ ಅನಮಯ ಯೋಗೇಶ್ ದಿವಾಕರ್ ಅವರು ಜನಪ್ರಿಯ ಕೌನ್ ಬನೇಗಾ ಕರೋಡ್ಪತಿ ಕ್ವಿಝ್ ಸ್ಪರ್ಧೆಯಲ್ಲಿ ಐವತ್ತು ಲಕ್ಷ ರೂ. ಗೆದ್ದಿದ್ದಾನೆ.
ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಟಿ.ವಿ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್ಪತಿ’ಯ ವಿದ್ಯಾರ್ಥಿ ವಿಶೇಷ ಸಂಚಿಕೆಯಲ್ಲಿ ಉಡುಪಿಯ ವಿದ್ಯಾರ್ಥಿ ಅನಮಯ ಪಾಲ್ಗೊಂಡಿದ್ದನು.
ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ವೇದಾಂತು ಆನ್ಲೈನ್ ಲರ್ನಿಂಗ್ ಆಪ್ನಲ್ಲಿ ಅ.5ರಿಂದ 25ರವರೆಗೆ ಆನ್ಲೈನ್ ಕ್ವಿಜ್ ಆಯೋಜಿಸಲಾಗಿತ್ತು. ದೇಶದಾದ್ಯಂತ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಾವಿರ ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿ ಆಯ್ಕೆಯಾಗಿದ್ದು, ಇದರಲ್ಲಿ ಅತಿಹೆಚ್ಚು ಅಂಕ ಪಡೆದ 200 ವಿದ್ಯಾರ್ಥಿಗಳಿಗೆ ಸಂದರ್ಶನ ನಡೆದಿತ್ತು. ಅಂತಿಮ ಸುತ್ತಿನ ಸ್ಪರ್ಧೆಗೆ ದೇಶಾದ್ಯಂತ 8 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅನಮಯ ಸಹ ಅವಕಾಶ ಪಡೆದಿದ್ದ.
ಮೂರನೇ ಸ್ಪರ್ಧಿಯಾಗಿ ಸ್ಪರ್ಧೆಗಿಳಿದ್ದ ಅನಮಯ 14 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ್ದು, 15ನೇ ಪ್ರಶ್ನೆಗೆ ಉತ್ತರಿಸುವ ಆಯ್ಕೆಯಿಂದ ಹಿಂದಕ್ಕೆ ಸರಿದು 50 ಲಕ್ಷ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ಸೋನಿ ವಾಹಿನಿಯಲ್ಲಿ ಡಿ.14ರಿಂದ 16ರವರೆಗೆ ಕ್ವಿಜ್ ಪ್ರಸಾರವಾಗಿದೆ.
15ನೇ ಪ್ರಶ್ನೆ 1 ಕೋಟಿ ರೂ. ಮೊತ್ತದ್ದಾಗಿತ್ತು. ಆದರೆ 14 ಪ್ರಶ್ನೆಗಳಿಗೆ ಉತ್ತರ ನೀಡಿ ಗರಿಷ್ಠ ಬಹುಮಾನ ಪಡೆದಿರುವುದು ಸಂತಸ ತಂದಿದೆ. ರಾಜ್ಯದ ಕರಾವಳಿಯ ಈ ವಿದ್ಯಾರ್ಥಿ ಪೋಷಕರ ಹಾಗೂ ಶಾಲೆಯ ಕೀರ್ತಿ ಪತಾಕೆಯನ್ನು ದೇಶ ಮಟ್ಟದಲ್ಲೂ ಪಸರಿಸಿದ್ದಾನೆ.