ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರ ಸಂಘ 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟು 42.91 ಲ. ರೂ. ನಿವ್ವಳ ಲಾಭ ಗಳಿಸಿದ್ದು, ಶೇ.10 ಡಿವಿಡೆಂಡ್ ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ. ಲಕ್ಷ್ಮೀ ನಾರಾಯಣ ಉಡುಪ ಅವರು ಹೇಳಿದರು.
ಅವರು ಶನಿವಾರ ಪುಂಜಾಲಕಟ್ಟೆಯಲ್ಲಿ ಸಂಘದ ಕೇಂದ್ರ ಕಚೇರಿ ಸುಧನ್ವ ಇದರ ಸುವಿಧ ಸಹಕಾರಿ ಸಭಾ ಭವನದಲ್ಲಿ ಜರಗಿದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘವು ಕೊರೊನಾ ಮಹಾಮಾರಿಯ ನಡುವೆಯೂ ಪ್ರಸಕ್ತ ವರ್ಷ 134.65 ಕೋಟಿ ರೂ. ವ್ಯವಹಾರ ನಡೆಸಿದೆ. ಸಂಘವು ಒಟ್ಟು 2,882 ಸದಸ್ಯತನ ಹೊಂದಿದ್ದು, 96.19 ಲ.ರೂ. ಪಾಲು ಬಂಡವಾಳ, 19.74 ಕೋ.ರೂ.ಠೇವಣಿ ಹೊಂದಿದೆ. ದ.ಕ.ಜಿಲ್ಲಾ ಕೇಂದ್ರಸಹಕಾರಿ ಬ್ಯಾಂಕ್ನಿಂದ 5.88 ಕೋ.ರೂ. ಸಾಲ ಪಡೆದಿದ್ದು, ಸದಸ್ಯರಿಗೆ 20.33 ಕೋ.ರೂ. ಸಾಲ ನೀಡಿದೆ. ಪ್ರಸಕ್ತ ಸಾಲಿನಲ್ಲಿ ಶೇ.96 ಸಾಲ ವಸೂಲಿ ಮಾಡಿ ದಾಖಲೆ ಸಾಧಿಸಿದೆ. ವ್ಯಾಪಾರ ವಹಿವಾಟಿನಲ್ಲಿ 4.43ಲ.ರೂ ಲಾಭ ಪಡೆದಿದೆ. ಸಂಘ ಲಾಭ ಗಳಿಸುತ್ತಾ ಬಂದಿದ್ದು ಲೆಕ್ಕ ಪರಿಶೋಧನೆಯಲ್ಲಿ ಎ ಶ್ರೇಣಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಇರ್ವತ್ತೂರು ಶಾಖೆಗೆ ಸ್ವಂತ ಕಟ್ಟಡ ಮತ್ತು ಬಾಂಬಿಲದಲ್ಲಿ ಸ್ವಂತ ಕಟ್ಟಡದಲ್ಲಿ ಶಾಖೆ ನಿರ್ಮಿಸುವ ಚಿಂತನೆ ನಡೆಸಲಾಗಿದೆ ಎಂದರು. ಸಾಲ ವಸೂಲಾತಿ ಹಾಗೂ ಸಾಲ ಪಡೆಯುವಲ್ಲಿ ಸಹಕರಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ಸಂಘದ ಉಪಾಧ್ಯಕ್ಷ ಉಮೇಶ್ ಪೂಜಾರಿ, ನಿರ್ದೇಶಕರಾದ ಬೂಬ ಸಪಲ್ಯ, ಸೀತಾರಾಮ ಶೆಟ್ಟಿ, ಸುಂದರ ನಾಯ್ಕ, ನಾರಾಯಣ ಪೂಜಾರಿ, ಚಂದ್ರಶೇಖರ ಹೆಗ್ಡೆ, ಸಂತೋಷ್ ಕುಮಾರ್ ಶೆಟ್ಟಿ, ಹರ್ಷಿಣಿ ಪುಷ್ಪಾನಂದ, ಪ್ರಭಾಕರ ಪಿ.ಎಂ., ದಿನೇಶ್ ಮೂಲ್ಯ, ಶಿವಯ್ಯ ಪರವ, ಸಿಬಂದಿ ವರ್ಗ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಕೆ. ಲಕ್ಷ್ಮೀ ನಾರಾಯಣ ಉಡುಪ ಸ್ವಾಗತಿಸಿದರು. ಸಂಘದ ಕಾರ್ಯನಿರ್ವಹಣಾಽಕಾರಿ ಮಂಜಪ್ಪ ಮೂಲ್ಯ ಅವರು ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳ ವಿವರ ನೀಡಿದರು.