ಬಂಟ್ವಾಳ :ಗ್ರಾಮಪಂಚಾಯತ್ ಚುನಾವಣೆಯ ಫಲಿತಾಂಶ ಏನೇ ಆದರೂ ಚಿಂತೆ ಬೇಡ, ನಿರಂತರ ಜನಸಂಪರ್ಕದೊಂದಿಗೆ ಕಾಂಗ್ರೇಸ್ ಪಕ್ಷದ ತತ್ವಗಳನ್ನು ಎತ್ತಿಹಿಡಿಯಿರಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆಮಾಡಿದ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.



ಬಿಜೆಪಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಬೆದರಿಕೆಯ ವಾತಾವರಣವನ್ನು ಸೃಷ್ಟಿಸಿದೆ. ಬಿಜೆಪಿಯ ಬೆದರಿಕೆಗೆ ಜಗ್ಗದೆ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಕಾರ್ಯಕರ್ತರನ್ನು ಅಭಿನಂದಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಮತದಾರ ನ ಕೈಯಲ್ಲಿ ಫಲಿತಾಂಶ ಅಡಗಿದೆ, ರಾಜಕೀಯದಲ್ಲಿ ಅಧಿಕಾರದ ಏರಿಳಿತಗಳು ಸಹಜ, ಇದನ್ನು ಕಾಂಗ್ರೇಸ್ ಪಕ್ಷ ಎದುರಿಸುತ್ತಾ ಬಂದಿದೆ ಎಂದ ಅವರು,
ಕಾಂಗ್ರೇಸ್ ಪಕ್ಷ ಹಾಗೂ ಕಾಂಗ್ರೇಸ್ ಕಾರ್ಯಕರ್ತರ ಋಣವನ್ನು ತಾನು ಎಂದೂ ಮರೆಯಲಾರೆ ಎಂದ ಅವರು, ನಾನು ಮತೀಯವಾದಿಯೂ ಅಲ್ಲ, ಜಾತಿವಾದಿಯೂ ಅಲ್ಲ.. ಯಾವುದೇ ಮತೀಯವಾದಿತ್ವವನ್ನು ನಾನು ಸ್ಪಷ್ಟವಾಗಿ ವಿರೋಧಿಸುತ್ತೇನೆ ಆದರೂ, ರಮಾನಾಥ ರೈ ಸಾಮಾಜಿಕ ಬದುಕನ್ನು ನಡೆಸುತ್ತಿರುವ ನನ್ನ ವಿರುದ್ಧ ಸುಳ್ಳು ಅಪಪ್ರಚಾರ ಮಾಡಿದ್ದಾರೆ. ತಾಲೂಕಿನಲ್ಲಿ ನಡೆದ ಕೊಲೆಕೃತ್ಯವೆಸಗಿದವರಲ್ಲಿ ಕಾಂಗ್ರೇಸಿನ ಯಾವ ಕಾರ್ಯಕರ್ತರೂ ಭಾಗಿಯಾಗಿಲ್ಲ.
ನಿರಂತರ ವಾಗಿ ಪಕ್ಷದ ಏಳಿಗೆಗೆ ಶ್ರಮಿಸುವುದೇ ಪಕ್ಷದ ಋಣತೀರಿಸುವ ಮಾರ್ಗ ಎಂದರು.
ವಿಕೇಂದ್ರಿಕರಣದ ಕನಸಿನ ಪಂಚಾಯತ್ ರಾಜ್ ವ್ಯವಸ್ಥೆಗೆ ತಿದ್ದುಪಡಿ ತಂದು ಅತ್ಯಧಿಕ ಅನುದಾನ ಗ್ರಾಮಪಂಚಾಯತ್ ಗೆ ಒದಗಿಬರಲು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕಾರಣಕರ್ತರು ಎಂದರು.
ಪೆಟ್ರೋಲ್,ಡೀಸೆಲ್ಬೆಲೆ ಹಾಗೂ ಗ್ಯಾಸ್ ದರ ದಿನದಿಂದ ದಿನಕ್ಕೆ ಏರುಕೆಯಾಗುತ್ತಿದೆ. ಬಡವರ ಕಿಸೆಯಿಂದ ದೋಚಿ ಬಂಡವಾಳ ಶಾಹಿಗಳ ಹೊಟ್ಟೆ ತುಂಬಿಸುವ ಕೆಲ ಬಿಜೆಪಿ ಸರ್ಕಾರದಿಂದ ಆಗುತ್ತಿದೆ.
ಕೊರೋನಾ ಸಂದರ್ಭದಲ್ಲಿಯೂ ಭಷ್ಟಾಚಾರ ನಡೆದಿದ್ದು ಅವೈಜ್ಞಾನಿಕವಾದ ವಿದ್ಯುತ್ ಬಿಲ್ನಿಂದ ಬಡವರುಸಂಕಟಪಡುವಂತಾಗಿದೆ ಎಂದವರು ಟೀಕಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಅಧಿಕಾರ ಕೊಟ್ಟು ನಾವೇ ಬೆಳೆಸಿದ ನಾಯಕರು ಇಂದು ಪಕ್ಷ ಬಿಟ್ಟಿದ್ದಾರೆ, ಅದಕ್ಕೆ ಯಾರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಪಕ್ಷಕ್ಕೆ ಕಾರ್ಯಕರ್ತರು ಅನಿವಾರ್ಯ, ಅವರ ಬಲದಿಂದ ಬಂಟ್ವಾಳದಲ್ಲಿ ರಮಾನಾಥ ರೈ ಮತ್ತೆ ಶಾಸಕರಾಗಲಿದ್ದಾರೆ ಎಂದರು.
ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ,ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿ, ಬಂಟ್ವಾಳ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ, ಬಂಟ್ವಾಳ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಯುವ ಕಾಂಗ್ರೇಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಪುರಸಭಾ ಸದಸ್ಯ ಜನಾರ್ಧನ ಚೆಂಡ್ತಿಮಾರ್, ಪ್ರಮುಖರಾದ ಸುದರ್ಶನ್ ಜೈನ್, ಅಮ್ಮು ರೈ ಹರ್ಕಾಡಿ, ಜಿನರಾಜ್ ಆರಿಗ, ಮಾಯಿಲಪ್ಪ ಸಾಲ್ಯಾನ್ ಉಪಸ್ಥಿತರಿದ್ದರು.
ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಜಗದೀಶ್ ಕೊಯಿಲ ಕಾರ್ಯಕ್ರಮ ನಿರ್ವಹಿಸಿದರು. ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ವಂದಿಸಿದರು.