ಅವಳು
ಬಂದ ಎರಡು ಪಟ್ಟು
ವೇಗದಲ್ಲಿಯೇ ದಿಢೀರನೆ
ಹೊರಟು ನಿಂತಾಗ
ತುಂಬಿತು ಕಣ್ಣು !
ಜಾರಿ ಬೀಳದ ಕಂಬನಿ
ಅಂತರ್ಧಾನಿಯಾಯಿತು
ತನ್ನಷ್ಟಕ್ಕೆ ತಾನು!
ಹೊರಟ ಪಾದಗಳು ಆಗ
ಎದೆಯ ಮೇಲೆ ಮೊದಲ
ಹೆಜ್ಜೆ ಇಟ್ಟಾಗ ಅದೆಷ್ಟು ಹಿಗ್ಗು!
ಅವಳೊಲವಿಗೆದೆಯೇ ಹೂ
ಹಾಸು ರತ್ನಗಂಬಳಿ!
ಇಂದು ಸುಟ್ಟು ಕರಕಲಾದ
ಬೂದಿ ಮೆತ್ತಿದ ಬೋಳು ಗುಡ್ಡ!
ಮೋಹ ವ್ಯಾಮೋಹ,ಆಸೆ
ಲಾಲಸೆಗಳೆಲ್ಲ ಎಲ್ಲೋ ಬಿದ್ದು
ಕೊಂಡಿವೆ ಬಿರಿದೆದೆಯ
ಗೋಣಿಚೀಲವ ಕಳಚಿ!
ಬಿಸಿಯುಸಿರ ಬಸಿರು
ಹೆರಿಗೆಗಾಣದೆ ಗರ್ಭಪಾತವೂ
ಆಗದೆ ಆಪೋಶನಗೈದವಳ
ಕಾಲ ಕೆರವಾಗಿ ನರಳಿದರೂ
ಬಿಡದ ಮಮಕಾರ
ಎಲ್ಲೆಲ್ಲೂ ಅಂಧಕಾರ?
ಸರಿ
ಈಗ ಅವಳ ಧಿಕ್ಕಾರದ
ದಾರಿಯೇ ಆಯಿತು
ಊರುಗೋಲು ಕೈಗಂದೀಲು!
ಜಗದ ಜಂಜಡವ ಕಳಚಿ
ಜೀವನ್ಮುಖಿಯಾಗುವುದಕೆ!
ಜೀವತತ್ವದಲೆ ನೆಲೆ ನಿಂತು
ಜೀವೋತ್ತಮನಾಗುವುದಕೆ!
ಹೋಗಿ ಬಾ ಗೆಳತಿ
ನಮಿಸುವೆ ನಿನಗೆ
ನರತತ್ವದ ಪೊರೆ
ಕಳಚಿದ
ಸರ್ಪವಾದುದಕೆ!
#ನೀ.ಶ್ರೀಶೈಲ ಹುಲ್ಲೂರು