ವಿಟ್ಲ: ಮುಂಬಯಿಯ ಭವಾನಿ ಶಿಪ್ಪಿಂಗ್ ಸರ್ವಿಸಸ್ ಮಾಲಕರಾದ ಉದ್ಯಮಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ಚೆಲ್ಲಡ್ಕ ನಿವಾಸಿ ಕುಸುಮೋದರ ದೇರಣ್ಣ ಶೆಟ್ಟಿ (ಕೆ.ಡಿ.ಶೆಟ್ಟಿ) ಚೆಲ್ಲಡ್ಕ ಅವರಿಗೆ ೨೦೨೦ನೇ ಸಾಲಿನ ಹೊರನಾಡು ಕನ್ನಡಿಗ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಚೆಲ್ಲಡ್ಕಗುತ್ತು ದೇರಣ್ಣ ಶೆಟ್ಟಿ ಹಾಗೂ ಭವಾನಿ ದೇರಣ್ಣ ಶೆಟ್ಟಿ ಅವರ ಪುತ್ರರಾದ ಕೆ.ಡಿ.ಶೆಟ್ಟಿ ಪ್ರಾಥಮಿಕ ಶಿಕ್ಷಣವನ್ನು ಅಮೈ – ಕೇಪುವಿನಲ್ಲಿ ಮುಗಿಸಿ ಮಾಧ್ಯಮಿಕ ಶಿಕ್ಷಣವನ್ನು ಅಡ್ಯನಡ್ಕದಲ್ಲಿ ಪೂರೈಸಿದ್ದಾರೆ. ಪದವಿ ಶಿಕ್ಷಣವನ್ನು ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ವಾಣಿಜ್ಯ ವಿಭಾಗದಲ್ಲಿ ನಡೆಸಿದ್ದಾರೆ.
1978ರಲ್ಲಿ ಮೆಸರ್ಸ್ ಮೆಟ್ ಕಾಪ್ ಆಂಡ್ ಹಾರ್ಡ್ ಕಿಸ್ ಸನ್ ಶಿಪ್ಪಿಂಗ್ ಕಂಪನಿಯಲ್ಲಿ ಕೆಲಸ ಆರಂಭಿಸಿದ್ದು, 12 ವರ್ಷಗಳ ಸೇವೆ ಬಳಿಕ ಹಾರ್ಡ್ ಕೋರ್ ಶಿಪ್ಪಿಂಗ್ ಕಂಪನಿಯ ಮೆಸರ್ಸ್ ಟ್ರಾನ್ಸ್ ವರ್ಲ್ಡ್ ಗ್ರೂಫ್ ಆಫ್ ಕಂಪನಿಯಲ್ಲಿ 16 ವರ್ಷಗಳ ಕಾಲ ಎಕ್ಸಿಕೂಟಿವ್ ಜನರಲ್ ಮೆನೇಜರ್ ಆಗಿದ್ದರು. 2007ರಲ್ಲಿ ತಾಯಿ ಭವಾನಿ ದೇರಣ್ಣ ಶೆಟ್ಟಿ ಹೆಸರಿನಲ್ಲಿ ಶಿಪ್ಪಿಂಗ್ ಕಂಪನಿಯನ್ನು ಪ್ರಾರಂಭಿಸಿದರು. ಸದ್ಯ ವಾಯು ಹಾಗೂ ಜಲ ಪ್ರದೇಶದ ಮೂಲಕ ಭಾರತದ 18 ವಲಯಗಳಲ್ಲಿ ಹಾಗೂ 4 ವಿದೇಶಗಳಲ್ಲಿ ಕಂಪನಿ ಕಚೇರಿಯನ್ನು ವಿಸ್ತರಿಸಿ ಕೊಂಡಿದೆ.
2006ರಲ್ಲಿ ಶಿಪ್ಪಿಂಗ್ ನೋಬಲ್ ಪ್ರಶಸ್ತಿ, 2011ರಲ್ಲಿ ಸ್ವಸ್ತಿಶ್ರೀ ರಾಜ್ಯ ಪ್ರಶಸ್ತಿ ಸೇರಿ ೭ ಬಂಗಾರ ಪದಕದ ಪುರಸ್ಕಾರ ಹಾಗೂ ಹಲವು ಗೌರವಗಳನ್ನು ಪಡೆದಿದ್ದಾರೆ. ಭವಾನಿ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಿ ಈ ಮೂಲಕ ರಕ್ತದಾನ ಶಿಬಿರ, ವೈದ್ಯಕೀಯ ಶಿಬಿರ, ಅದಿವಾಸಿ ಕಲ್ಯಾಣ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ನಿರುದ್ಯೋಗಿ ಯುವಕ- ಯುವತಿಕರಿಗೆ ಉದ್ಯೋಗ, ಶಿಕ್ಷಣಕ್ಕೆ ಆರ್ಥಿಕ ಸಹಾಯ, ಅತಿಬಡ ಯುವತಿಯರಿಗೆ ವಿವಾಹದ ಖರ್ಚು, ಮಂಗಳ ಸೂತ್ರವನ್ನು ನೀಡುವ ಮೂಲಕ ಅರ್ಥಪೂರ್ಣ ಸಾಮಾಜಿಕ ಸೇವೆಗಳಿಂದ ಮಾದರಿಯಾಗಿದ್ದಾರೆ.