ಪುತ್ತೂರು : ಸಂಗೀತ ಇಲ್ಲದ ಸ್ಥಳವಿಲ್ಲ, ನಿಶ್ಯಬ್ಧದಲ್ಲೂ ಸಂಗೀತವನ್ನು ಹುಡುಕುವ, ಗ್ರಹಿಸುವ, ಪ್ರೀತಿಸುವ ಕೆಲಸ ಆಗಬೇಕು ಎಂದು ಕು.ಸಹಮತ ಹೇಳಿದರು.
ದರ್ಬೆ ವಿದ್ಯಾನಗರದಲ್ಲಿ ಬಹುವಚನಂ ಆಯೋಜಿಸಿದ್ದ ಉಪನ್ಯಾಸ ಮಾಲಿಕೆಯಲ್ಲಿ ರಾಜಸ್ಥಾನದ ಕಬೀರ್ ಯಾತ್ರೆಯ ಅನುಭವಗಳನ್ನು ತೆರೆದಿಟ್ಟರು.
ಫಿಲಾಸಫಿ ಹೇಳುವುದು ಸುಲಭ, ಅದನ್ನು ಸ್ವತಃ ಅನುಸರಿಸುವುದು ಕಷ್ಟ, ನುಡಿಯೂ ನಡೆಯಾಗಬೇಕು, ಕಬೀರರ ದೋಹೆಗಳನ್ನು ಕೇಳುಗರಿಗೆ ತಲುಪಿಸಿದ ಸಂಗೀತಗಾರ ಕುಮಾರಗಂಧರ್ವರು ಈ ಪರಿಯಲ್ಲಿ ಬದುಕಿದವರು ಎಂದರು.
ಹಾಡು ಕೇವಲ ಹಾಡಾಗಿರದೆ, ಮತ್ತಷ್ಟು ಹಾಡುಗಳ ಸೃಷ್ಟಿಗೆ ಕಾರಣವಾಗಬೇಕು. ಕಬೀರ ರ ಹಾಡುಗಳಿಗೆ ಇಂತಹಾ ಶಕ್ತಿ ಇದೆ. ಕಬೀರರ ಹಾಡುಗಳಲ್ಲಿ ಸ್ವಂತಿಕೆಯ ಜೊತೆಗೆ ಹಾಡುಕಟ್ಟಿದ ಊರಿನ ಆಶಯಗಳಿತ್ತು, ಅಲ್ಲಿನ ಸಂಪ್ರದಾಯವಿತ್ತು, ಜನಗಳ ಆಚರಣೆಯಿತ್ತು.. ಹೀಗಾಗಿ ಕಬೀರರ ಹಾಡುಗಳ ಸಾಲುಗಳು ಹೃದಯವನ್ನು ತಟ್ಟುತ್ತಿದೆ ಎಂದವರು ವ್ಯಾಖ್ಯಾನಿಸಿದರು.
ಬೆಟ್ಟಂಪಾಡಿ ಕಾಲೇಜಿನ ಪ್ರಾಂಶುಪಾಲ ವರದರಾಜ ಚಂದ್ರಗಿರಿ ಮಾತನಾಡಿ, ಎಳೆವಯಸ್ಸಿನಲ್ಲೇ ಸಂಗೀತದ ಅಭಿರುಚಿಯನ್ನು ಬೆಳೆಸಿಕೊಂಡು, ತನ್ನ ಅನುಭವಗಳನ್ನು ಸಹಮತ ಮನೋಜ್ಞವಾಗಿ ಬಿಚ್ಚಿಟ್ಟಿದ್ದಾರೆ ಎಂದರು.
ರಂಗಕರ್ಮಿ ಐಕೆ ಬೊಳುವಾರು ಸ್ವಾಗತಿಸಿದರು. ಬಹುವಚನಂ ನ ಡಾ.ಶ್ರೀಶ ಕುಮಾರ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.