ಕೆವಾಡಿಯಾ(ಗುಜರಾತ್) : ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿರುವ ಸೈನಿಕರ ತ್ಯಾಗದ ಬಗ್ಗೆ ದುಃಖಿಸದ ಜನರನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಕಠಿಣ, ಬೇಸರದ ಸಂದರ್ಭದಲ್ಲೂ ಅವರು ರಾಜಕೀಯ ಮಾಡಿದ್ದಾರೆ. ಎಂದಿಗೂ ಕೂಡಾ ರಾಷ್ಟ್ರದ ಹಿತಾಸಕ್ತಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಅವರು ಇಂದು (ಅ.31) ಬೆಳಗ್ಗೆ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 145ನೇ ಜಯಂತಿ ಅಂಗವಾಗಿ ಗುಜರಾತ್ನ ಕೆವಾಡಿಯಾದ ನರ್ಮದಾ ನದಿ ತೀರದಲ್ಲಿ ರಾಷ್ಟ್ರೀಯ ಏಕತಾ ದಿನದ ಪರೇಡ್ ವೀಕ್ಷಿಸಿ ಮಾತನಾಡಿದರು. ಇದಕ್ಕೂ ಮೊದಲು ಪಟೇಲ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.
ದೇಶದ ಅತ್ಯಂತ ದೊಡ್ಡ ಪಿಡುಗಾದ ಭಯೋತ್ಪಾದನೆಯ ವಿರುದ್ದ ವಿಶ್ವದ ಎಲ್ಲಾ ದೇಶಗಳು ಒಗ್ಗೂಡಿ ಹೋರಾಟ ನಡೆಸಬೇಕಾಗಿದೆ. ಹಿಂಸಾಚಾರದಿಂದಾಗಿ ಯಾರಿಗೂ ಲಾಭವಿಲ್ಲ. ಭಾರತ ಎಂದಿಗೂ ಈ ಭಯೋತ್ಪಾದನೆ ಕೃತ್ಯಗಳಿಗೆ ವಿರೋಧವಾಗಿದೆ ಎಂದು ಹೇಳಿದ್ದಾರೆ. ಉಗ್ರರ ದಾಳಿಯಲ್ಲಿ ಯೋಧರು ಹುತಾತ್ಮರಾಗಿದ್ದರೆ, ಈ ಜನರು ಕೇವಲ ರಾಜಕೀಯ ಮಾಡುವುದರಲ್ಲಿಯೇ ಕಾಲ ಕಳೆದಿದ್ದರು. ದೇಶದ ಹಿತಾಸಕ್ತಿಯ ವಿಚಾರಗಳಲ್ಲಿ ಇಂತಹ ರಾಜಕೀಯ ಮಾಡಬೇಡಿ ಎಂದು ನಾನು ಮನವಿ ಮಾಡಿಕೊಳ್ಳುವುದಾಗಿ ಪರೋಕ್ಷವಾಗಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನದ ಸಂಸತ್ ನಲ್ಲಿಯೇ ಪುಲ್ವಾಮಾ ಭಯೋತ್ಪಾದಕ ಘಟನೆಯ ಕುರಿತು ಸತ್ಯವನ್ನು ಬಯಲುಗೊಳಿಸಿದೆ. ಇಂದು ಜಗತ್ತಿನ ಎಲ್ಲಾ ದೇಶಗಳು ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಬೇಕಾದ ಅಗತ್ಯವಿದೆ. ಯಾರೊಬ್ಬರಿಗೂ ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಲಾಭವಿಲ್ಲ. ಭಾರತ ಸದಾ ಭಯೋತ್ಪಾದನೆ ವಿರುದ್ಧ ಹೋರಾಡಲಿದೆ ಎಂದರು.