ಮಂಗಳೂರು: ಮಂಗಳೂರು ಉಪವಿಭಾಗಾಧಿಕಾರಿ ಮದನ್ ಮೋಹನ್ ಸಿ. ಅವರನ್ನು ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಮಂಗಳೂರು ಸ್ಮಾರ್ಟ್ ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ರವಿಚಂದ್ರ ನಾಯಕ್ ಅವರನ್ನು ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮದನ್ ಮೋಹನ್ ಅವರು ಮಂಗಳೂರಿನ ಮುಡಿಪುವಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದ್ದ ಕೆಂಪು ಬಾಕ್ಸೈಟ್ ದಂಧೆ ಮೇಲೆ ದಾಳಿ ಮಾಡಿದ ಬಳಿಕ ಅವರು ವರ್ಗಾವಣೆ ಆಗಲಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು.
ಮದನ್ ಮೋಹನ್ ಅವರು ಕೆಂಪು ಬಾಕ್ಸೈಟ್ ದಂಧೆ ಮೇಲೆ ದಾಳಿ ಮಾಡಿ 30 ಲಾರಿ, ಹಿಟಾಚಿ, ಜೆಸಿಬಿಗಳನ್ನು ವಶಪಡಿಸಿಕೊಂಡಿದ್ದರು. ಇದರಿಂದ ಈ ದಂಧೆಯ ಬೆನ್ನ ಹಿಂದೆ ಇದ್ದ ಪ್ರಭಾವಿಗಳ ಕಣ್ಣು ಕೆಂಪಾಗಿಸಿತ್ತು. ಕೆಂಪು ಬಾಕ್ಸೈಟ್ ದಂಧೆಯ ಬಗ್ಗೆ ತನಿಖೆ ನಡೆಸಲು ಮಂಗಳೂರು ಉಪವಿಭಾಗಾಧಿಕಾರಿಯಾಗಿದ್ದ ಮದನ್ ಮೋಹನ್ ಸೇರಿದಂತೆ 7 ಅಧಿಕಾರಿಗಳ ವಿಶೇಷ ತಂಡವನ್ನು ಅಕ್ಟೋಬರ್ 10ಕ್ಕೆ ರಚಿಸಿದ್ದರು. ಈ ತಂಡ ಅಕ್ಟೋಬರ್ 20 ರಂದು ವರದಿ ನೀಡಬೇಕಿತ್ತು. ಅದಕ್ಕೂ ಮೊದಲೇ ಮದನ್ ಮೋಹನ್ ಅವರ ವರ್ಗಾವಣೆ ಮಾಡಲಾಗಿದೆ.