ಮಂಗಳೂರು : ಡ್ರಗ್ಸ್ ಕೇಸ್ ಆರೋಪದ ಮೇಲೆ ಕಿಶೋರ್ ಅಮನ್ ಬಂಧನದ ನಂತರ ಮಂಗಳೂರಿನಲ್ಲಿನ ಡ್ರಗ್ಸ್ ಜಾಲದ ಬೆನ್ನು ಬಿದ್ದಿದ್ದ ದಕ್ಷ ಅಧಿಕಾರಿ ಶಿವಪ್ರಕಾಶ್ ನಾಯಕ್ ಅವರ ವರ್ಗಾವಣೆ ಆದೇಶಕ್ಕೆ ನಾಗರೀಕರು ಸರ್ಕಾರದ ವಿರುದ್ಧ ತಿರುಗಿಬಿದ್ದ ಕಾರಣ ರಾಜ್ಯ ಸರ್ಕಾರ ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯಕ್ ವರ್ಗಾವಣೆಗೆ ಬ್ರೇಕ್ ಹಾಕಿದೆ.
ಕಿಶೋರ್ ಅಮನ್ ಬಂಧನದ ನಂತರ ಮಂಗಳೂರಿನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳು ಹೊರ ಬಿದ್ದಿತ್ತು. ಆ ಬಳಿಕ ಕಿಶೋರ್ ಅಮನ್ ನನ್ನು ಬಂಧಿಸಿದಂತೆ ಸಿಸಿಬಿ ಇನ್ಸ್ ಪೆಕ್ಟರ್ ವರ್ಗಾವಣೆಗೆ ರಾಜಕೀಯ ಒತ್ತಡ ಕೂಡ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಸಿಸಿಬಿ ಇನ್ಸ್ ಪೆಕ್ಟರ್ ಅವರನ್ನು ದಿಢೀರ್ ವರ್ಗಾವಣೆ ಮಾಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಡ್ರಗ್ಸ್ ಪ್ರಕರಣ ತನಿಖೆ ನಡೆಯುತ್ತಿರುವಾಗಲೇ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಿದ್ದರ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದರು.
ಆ ನಂತರ ಇದೀಗ ರಾಜ್ಯ ಸರ್ಕಾರ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯಕ್ ಅವರ ವರ್ಗಾವಣೆ ಆದೇಶವನ್ನು ತಡೆ ಹಿಡಿದಿದೆ. ಈ ಮೂಲಕ ಇನ್ಸ್ ಪೆಕ್ಟರ್ ವರ್ಗಾವಣೆಗೆ ಬ್ರೇಕ್ ಹಾಕಿದ್ದು, ಇದೀಗ ಸಿಸಿಬಿ ಇನ್ಸ್ ಪೆಕ್ಟರ್ ಆಗಿ ಶಿವಪ್ರಕಾಶ್ ನಾಯಕ್ ಅವರೇ ಮುಂದುವರೆಯಲಿದ್ದಾರೆ ಎಂದು ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.