ಮಂಗಳೂರು: ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆ ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ದಸರಾ ಆಚರಿಸುವ ಬಗ್ಗೆ ಮಹತ್ವದ ಸೂಚನೆ ನೀಡಿದ್ದಾರೆ.
ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಜಿಲ್ಲೆಯಲ್ಲಿ ಅ.17 ರಿಂದ 26 ರ ವರೆಗೆ ದಸರಾವನ್ನು ಸಾರ್ವಜನಿಕರು ಸರಳವಾಗಿ, ಒಂದೆಡೆ 100 ಜನಕ್ಕಿಂತ ಹೆಚ್ಚು ಸೇರದೆ ಆಚರಿಸಬೇಕೆಂದು ಹೇಳಿದ್ದಾರೆ.
ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸದಿದ್ದಲ್ಲಿ ಕಾರ್ಯಕ್ರಮದ ಆಯೋಜಕರು, ದೇವಸ್ಥಾನದ ಆಡಳಿತಾಧಿಕರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಸಾಮಾಜಿಕ ಅಂತರವಿಲ್ಲದೆ ನಡೆಸುವ ಕಾರ್ಯಕ್ರಮವನ್ನು ಕಡ್ಡಾಯವಾಗಿ ನಿಷೇಧಿಸಿದೆ. ಹುಲಿ ವೇಷಗಳಿಗೆ ಸೀಮಿತ ಅನುಮತಿ ಸೇರಿದಂತೆ ಮಾರ್ಗಸೂಚಿಗಳು ನವರಾತ್ರಿ ಹಾಗೂ ದುರ್ಗಾ ಪೂಜೆಯ ಆಚರಣೆಗೂ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.