Tuesday, October 31, 2023

ರಾಷ್ಟ್ರೀಯ ಹೆದ್ದಾರಿ ಗುಂಡಿಗಳಿಗೆ ತೇಪೆ ಕಾರ್ಯ ಆರಂಭ

Must read

ಬಂಟ್ವಾಳ : ಹೊಂಡಗುಂಡಿಗಳಿಂದ ತುಂಬಿ ಸಂಚಾರ ದುರಸ್ತವಾಗಿದ್ದ ಬಿ.ಸಿ.ರೋಡು-ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯ ತೇಪೆ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಅ.1 ರಿಂದ ಬಿ.ಸಿ.ರೋಡಿ ಬಳಿಯಿಂದ ಆರಂಭಿಸಿದ್ದು, ಅಡ್ಡಹೊಳೆಯವರೆಗೂ ಈ ಕಾರ್ಯ ಮುಂದುವರಿಯಲಿದೆ.
ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯ ಕುರಿತು ವಾಹನ ಚಾಲಕರು, ಸಾರ್ವಜನಿಕರಿಂದ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗಿತ್ತು. ಕೆಲದಿನಗಳ ಹಿಂದೆ ರೋಡ್ ಚಾಲೆಂಜ್ ಹೆಸರಿನಲ್ಲೂ ಹೆದ್ದಾರಿ ಅವ್ಯವಸ್ಥೆಯ ಕುರಿತು ದೂರು, ಆಕ್ಷೇಪಗಳು ಕೇಳಿ ಬಂದಿದ್ದವು.
ಬಿ.ಸಿ.ರೋಡಿನ ಹಳೆ ಟೋಲ್‌ಗೇಟ್ ಬಳಿ(ಪಾಣೆಮಂಗಳೂರು ಬಳಿ)ಯಿಂದ ಕಾಮಗಾರಿ ಪ್ರಾರಂಭಗೊಂಡಿದ್ದು, ಬೃಹತ್ ಹಾಗೂ ಸಣ್ಣ ಹೊಂಡಗಳನ್ನು ಮುಚ್ಚಲಾಗುತ್ತಿದೆ. ಕಾಮಗಾರಿ ನಡೆಸುವ ಸಿಬಂದಿಯ ಮಾಹಿತಿ ಪ್ರಕಾರ ಹಿಂದೂಸ್ಥಾನ್ ಕನ್‌ಸ್ಟ್ರಕ್ಷನ್ಸ್ ಕಂಪೆನಿಯು ಕಾಮಗಾರಿ ನಡೆಸುತ್ತಿದ್ದು, ಅಡ್ಡಹೊಳೆವರೆಗೂ ಕಾಮಗಾರಿ ನಡೆಸುತ್ತೇವೆ. ಮಳೆ ಬಂದರೂ, ಹೆದ್ದಾರಿ ತೇಪೆ ಎದ್ದು ಹೋಗದಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸಿಬಂದಿ ತಿಳಿಸಿದ್ದಾರೆ.


ಪಾಣೆಮಂಗಳೂರು ಬಳಿ ಹೆದ್ದಾರಿಯಲ್ಲಿ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಕೆಲಹೊತ್ತು ಹೆದ್ದಾರಿಯ ಒಂದು ಬದಿಯ ವಾಹನಗಳನ್ನು ಪಾಣೆಮಂಗಳೂರು ಹಳೆ ಸೇತುವೆಯ ಮೂಲಕ ಕಳುಹಿಸಲಾಯಿತು. ವಾಹನ ಸಂಚಾರದಿಂದ ಕಾಮಗಾರಿಗೆ ಅಡ್ಡಿಯಾಗಬಾರದು ಎಂದು ಬಂಟ್ವಾಳ ಸಂಚಾರಿ ಪೊಲೀಸರು ನೆರವಾದರು.
ಪ್ರಸ್ತುತ ಹೆದ್ದಾರಿಯ ತೇಪೆ ಕಾರ್ಯದಿಂದ ವಾಹನ ಚಾಲಕರು/ ಸವಾರರು ಕೊಂಚ ನಿರಾಳರಾಗಿದ್ದು, ಆದರೆ ಮತ್ತೆ ಮಳೆ ಬಂದರೂ ಹೊಂಡಗಳು ಕಾಣಿಸಿಕೊಳ್ಳದ ರೀತಿಯಲ್ಲಿ ಎನ್‌ಎಚ್‌ಎಐ ಕ್ರಮಕೈಗೊಳ್ಳಬೇಕಿದೆ. ಜತೆಗೆ ಕೆಲವೊಂದು ಭಾಗಗಳಲ್ಲಿ ಹೆದ್ದಾರಿಯಲ್ಲೇ ನೀರು ನಿಂತು ಹೊಂಡ ಕಾಣಿಸಿಕೊಳ್ಳುತ್ತಿದ್ದು, ಅವುಗಳನ್ನೂ ಸರಿಪಡಿಸಬೇಕಿದೆ. ಬಿ.ಸಿ.ರೋಡು ಜಂಕ್ಷನ್ ಪ್ರದೇಶದಲ್ಲೂ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡಗಳಿದ್ದು, ಅವುಗಳ ತೇಪೆ ಕಾರ್ಯಕ್ಕೂ ಎನ್‌ಎಚ್‌ಎಐ ಮುಂದಾಗಬೇಕಿದೆ ಎಂದು ಆಗ್ರಹಗಳು ಕೇಳಿಬರುತ್ತಿದೆ.

More articles

Latest article