ಬಂಟ್ವಾಳ: ಪೆಟ್ರೋಲ್ ಪಂಪ್ ಗಳಿಗೆ ನುಗ್ಗಿ ರಾಬರಿ ನಡೆಸಿದ ಘಟನೆ ಇಂದು ಮುಂಜಾನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ದಾಸಕೋಡಿ ಎಂಬಲ್ಲಿ ನಡೆದಿರುವ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಸೂರಿಕುಮೇರು ಸಮೀಪದ ದಾಸಕೋಡಿ ಎಂಬಲ್ಲಿರುವ ಪೆಟ್ರೋಲ್ ಪಂಪ್ ಗೆ ಮುಂಜಾನೆ ವೇಳೆ ಬೈಕಿನಲ್ಲಿ ಬಂದ ಮೂವರು ವ್ಯಕ್ತಿಗಳು ರಾಬರಿ ನಡೆಸಿದ ಬಗ್ಗೆ ದೂರು ದಾಖಲಾಗಿದೆ.
ದಾಸಕೋಡಿಯಲ್ಲಿರುವ ಪೆಟ್ರೋಲ್ ಪಂಪ್ 24 ಘಂಟೆ ಗ್ರಾಹಕರಿಗೆ ಸೇವೆ ನೀಡುತ್ತಿದ್ದು, ಮುಂಜಾನೆ ವೇಳೆ ಇಬ್ಬರು ಕೆಲಸಗಾರರು ಪಂಪ್ ನಲ್ಲಿ ಇರುವ ವೇಳೆ ಒಂದೇ ಬೈಕಿನಲ್ಲಿ ಬಂದ ಮೂವರು ವ್ಯಕ್ತಿಗಳು ಚೂರಿ ಹಾಗೂ ರಾಡ್ ತೋರಿಸಿ ಹಣ ನೀಡುವಂತೆ ಒತ್ತಾಯಿಸಿದರು, ಹಣ ನೀಡದಿದ್ದಲ್ಲಿ ಕೊಲ್ಲುವುದಾಗಿ ಬೆದರಿಸಿ 22 ಸಾವಿರ ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಅಪರಾಧ ವಿಭಾಗದ ಎಸ್.ಐ. ಕಲೈಮಾರ್, ಎ.ಎಸ್.ಐ.ಶೈಲೇಶ್, ಹೆಚ್.ಸಿ.ಸುರೇಶ್ ಪಡಾರ್, ಕೃಷ್ಣ ಕುಲಾಲ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಸಿ ಕ್ಯಾಮರಾದಲ್ಲಿ ಸೆರೆ
ಬಂಟ್ವಾಳ ತಾಲೂಕಿನ ಎಲ್ಲಾ ಪಂಪ್ ಗಳ ಸಹಿತ ಮಂಗಳೂರು ವ್ಯಾಪ್ತಿಯ ಬಹುತೇಕ ಪಂಪ್ ಗಳಿಗೆ ನುಗ್ಗಿ ರಾಬರಿ ಮಾಡಲು ಯತ್ನಿಸಿ ದ ಘಟನೆ ನಡೆದಿದ್ದು ಎಲ್ಲವೂ ಸಿಸಿ ಕ್ಯಾಮರಾ ಗಳಲ್ಲಿ ಸೆರೆಯಾಗಿದೆ.
ಮಂಗಳೂರು ಉಜ್ಜೋಡಿ ಪಂಪ್ ಗೆ ನುಗ್ಗಿ ಅಲ್ಲಿನ ಪಂಪ್ ನಲ್ಲಿ ಪೆಟ್ರೋಲ್ ಹಾಕುತ್ತಿದ್ದ ಕೆಲಸಗಾರರನ್ನು ಬೆದರಿಸಿ 15 ಸಾವಿರ ಹಣವನ್ನು ಸುಲಿಗೆ ಮಾಡಿಕೊಂಡು ಬಂದಿರುವ ಅದೇ ಆರೋಪಿಗಳು, ಪಂಪ್ ವೆಲ್ ಪೆಟ್ರೋಲ್ ಪಂಪ್ ಗೆ ನುಗ್ಗಲು ಯತ್ನಿಸಿ ಸಾಧ್ಯವಾಗದೆ ಅಲ್ಲಿಂದ ಕಾಲ್ಕಿತ್ತು ಬಳಿಕ ದಾರಿ ಮಧ್ಯೆ ಬರುವ ಎಲ್ಲಾ ಪೆಟ್ರೋಲ್ ಪಂಪ್ ಗಳಿಗೆ ರಾಬರಿ ನಡೆಸಲು ಯತ್ನ ನಡೆಸಿ ವಿಫಲ ರಾಗಿದ್ದಾರೆ.
ಇವರು ರಾಬರಿ ನಡೆಸಲು ಪ್ರಯತ್ನ ಮಾಡಿರುವ ವಿಡಿಯೋ ಗಳು ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಪೋಲೀಸರು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.