ಬೆಂಗಳೂರು: ದ.ಕ.ಜಿಲ್ಲಾ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಸಚಿವ ಸ್ಥಾನಕ್ಕೆ ಕುತ್ತು ಬೀಳುತ್ತಾ? ಹೀಗೊಂದು ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೆ ಕೋಟ ದೆಹಲಿ ಪ್ರವಾಸ ಇನ್ನಷ್ಟು ಪುಷ್ಠಿ ನೀಡಿದೆ.
ರಾಜ್ಯ ಸಂಪುಟ ಪುನರ್ ರಚನೆ ಶೀಘ್ರದಲ್ಲೇ ಆಗಲಿದ್ದು ಸಚಿವ ಸ್ಥಾನಕ್ಕಾಗಿ ಲಾಬಿಗಳು ಈಗಾಗಲೇ ಶುರುವಾಗಿದೆ. ಈ ಮಧ್ಯೆ ಕೋಟ ಶ್ರೀನಿವಾಸ ಪೂಜಾರಿ ಅವರು ದಿಢೀರನೇ ವರಿಷ್ಠ ರ ಜೊತೆ ಮಾತುಕತೆಗೆ ದೆಹಲಿಗೆ ತೆರಳಿದ್ದಾರೆ.
ಉಡುಪಿಯಿಂದ ಶಾಸಕ ಸುನೀಲ್ ಕುಮಾರ್ ಕಾರ್ಕಳ, ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಸುಳ್ಯದ ಎಸ್ ಅಂಗಾರ ಈ ಮೂವರ ಪೈಕಿ ಯಾರಿಗಾದರೂ ಇಬ್ಬರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು ಈಗ ಸಚಿವ ಕೋಟ ಶ್ರೀನಿವಾಸ ಅವರು ದೆಹಲಿಗೆ ತೆರಳಿರುವುದು ಸಚಿವ ಸ್ಥಾನ ಉಳಿಸುವ ಸಲುವಾಗಿ ಎನ್ನಲಾಗಿದೆ.
ಬೈಂದೂರು ಮೆರೈನ್ ಯೋಜನೆ ಸೇರಿ ಇಲಾಖೆಯ 1,100 ಕೋಟಿ ರೂ. ಯೋಜನೆಗೆ ಸಮ್ಮತಿ ಪಡೆಯಲು ದೆಹಲಿಗೆ ಹೋಗಿರುವ ಅವರು ಇದರೊಂದಿಗೆ ತಮ್ಮ ಮಂತ್ರಿ ಸ್ಥಾನವನ್ನು ಉಳಿಸುವ ನಿಟ್ಟಿನಲ್ಲಿ ಸಚಿವರಾಗಿ ತಾನು ಮಾಡಿದ ಯೋಜನೆ, ಸಾಧನೆಗಳ ಪಟ್ಟಿ ಹಿಡಿದು ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ತಮ್ಮ ಸಚಿವ ಸ್ಥಾನ ಉಳಿಸುವ ನಿಟ್ಟಿನಲ್ಲಿ ಇಂದು ನರೇಂದ್ರ ಸಿಂಗ್ ತೋಮರ್ ಅವರನ್ನು ಕೋಟ ಅವರು ಭೇಟಿಯಾಗಲಿದ್ದು ನಾಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಷ್ಟ್ರೀಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಲಿದ್ದಾರೆ.
ಇನ್ನು ಅವರು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಕೂಡಾ ಭೇಟಿಯಾಗುವ ಸಮಯವಕಾಶಕ್ಕಾಗಿ ಯತ್ನ ನಡೆಸುತ್ತಿದ್ದಾರೆ ಎಂದು ಎನ್ನಲಾಗಿದೆ.