ಬಂಟ್ವಾಳ: ತಾಲೂಕಿನ ಸರಪಾಡಿ ಹಂಚಿಕಟ್ಟೆ ನಿವಾಸಿ, ಉಪ್ಪಿನಂಗಡಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಸಂಸ್ಥಾಪಕ, ಪ್ರಗತಿಪರ ಕೃಷಿಕ ಹರಿಶ್ಚಂದ್ರ ಆಚಾರ್ಯ ಎಸ್.(83) ಅವರು ಇಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಉಪ್ಪಿನಂಗಡಿಯ ಚಂದ್ರ ಜ್ಯುವೆಲ್ಲರಿಯ ಮಾಲಕರಾಗಿದ್ದು, ಸಾಮಾಜಿಕ ಕ್ಷೇತ್ರದಲ್ಲೂ ಸಕ್ರೀಯರಾಗಿ ಅಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಘವನ್ನು ಹುಟ್ಟು ಹಾಕಿದ್ದರು. ಸರಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ನಾಟಿ ವೈದ್ಯರಾಗಿಯೂ ಅವರು ಹೆಸರು ಮಾಡಿದ್ದು, ಅವರ ಅಗ್ನಿಶಾಂತಿ ತೈಲ ಸುಟ್ಟ ಗಾಯಕ್ಕೆ ರಾಮಬಾಣವಾಗಿದ್ದು, ಜನ ಎಲ್ಲೆಲ್ಲಿಂದಲೋ ಬಂದು ತೈಲವನ್ನು ಪಡೆಯುತ್ತಿದ್ದರು. ಭಜನೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಗಳಲ್ಲೂ ವಿಶೇಷ ಆಸಕ್ತಿಯನ್ನು ಹೊಂದಿದ್ದರು.
ಮೃತರು ಪತ್ನಿ, 6 ಮಂದಿ ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.