ಬಂಟ್ವಾಳ : ಬಂಟ್ವಾಳ ತಾ. ಕಾವಳಪಡೂರು ಗ್ರಾಮದ ವಗ್ಗ-ಕಕ್ಯಪದವು ರಸ್ತೆ ಬದಿ ತ್ಯಾಜ್ಯ ಎಸೆದುದರಿಂದ ಕಸದ ರಾಶಿಯಾಗಿದ್ದು, ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಸದಸ್ಯರು, ಅರಣ್ಯ ಇಲಾಖೆ ಹಾಗೂ ಗ್ರಾ.ಪಂ. ಜತೆ ಸೇರಿ ಸ್ವಚ್ಛತಾ ಕಾರ್ಯಕ್ರಮ ಮೂಲಕ ತೆರವುಗೊಳಿಸಿದರು.
ಭೂ ಕೈಲಾಸ ಪ್ರತೀತಿಯ ಶ್ರೀ ಕಾರಿಂಜೇಶ್ವರ ದೇವಸ್ಥಾನ ಸಮೀಪವಿರುವ ಕೊಡ್ಯಮಲೆ ರಕ್ಷಿತಾರಣ್ಯದ ನಡುವೆ ಹಾದು ಹೋಗಿರುವ ಈ ರಸ್ತೆ ಬದಿ ತ್ಯಾಜ್ಯವನ್ನು ಎಸೆದಿದ್ದು, ಪರಿಸರ ಕಲಷಿತಗೊಂಡಿತ್ತು. ಆಸ್ಪತ್ರೆ, ಕ್ಲಿನಿಕ್ಗಳಲ್ಲಿ ಬಳಸಿದ ವೈದ್ಯಕೀಯ ತ್ಯಾಜ್ಯ, ಕೋಳಿ ಮಾಂಸದ ಅಂಗಡಿ, ಕ್ಷೌರದಂಗಡಿ, ಗೃಹ ತ್ಯಾಜ್ಯ, ಮದ್ಯದ ಬಾಟಲಿಗಳು, ದೈವಾರಾಧನೆಗೆ ಉಪಯೋಗಿಸಿದ ವಸ್ತ್ರಗಳಿಂದ ಹಿಡಿದು ಎಲ್ಲ ತರಹದ ತ್ಯಾಜ್ಯವನ್ನು ತಂದು ಸುರಿಯಲಾಗಿತ್ತು. ಇದನ್ನು ಮನಗಂಡ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಸದಸ್ಯರು ಗ್ರಾ.ಪಂ. ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಅವರ ಸಹಕಾರದೊಂದಿಗೆ ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಬಂಟ್ವಾಳ ಅರಣ್ಯಾಧಿಕಾರಿ ಮತ್ತು ಸಿಬಂದಿಗಳು, ಕಾವಳಪಡೂರು ಗ್ರಾ.ಪಂ. ಪಿಡಿಒ ಮತ್ತು ಸಿಬಂದಿಗಳ ಸಹಕಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.