ಟ್ರಬಲ್ ಶೂಟರ್ ಎಂದೇ ಖ್ಯಾತಿಯ ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜಕೀಯ ಗುರು, ಸಾಲಮೇಳದ ರೂವಾರಿ ಹಿರಿಯ ನಾಯಕ ಬಿ.ಜನಾರ್ಧನ ಪೂಜಾರಿ ಅವರ ಮನೆಗೆ ಬೇಟಿ ನೀಡಿ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ರಾಜಕೀಯ ಆಶೀರ್ವಾದ ಪಡೆದರು.
ಬಳಿಕ ಅವರ ಆರೋಗ್ಯ ವಿಚಾರಿಸಿ ಮನೆಯಿಂದ ಹೊರಬಂದರು
ಸುಮಾರು 15 ನಿಮಿಷಗಳಿಂತಲೂ ಅಧಿಕ ಹೊತ್ತು ಪೂಜಾರಿ ಜೊತೆ ಕುಳಿತು ಕೊಂಡು ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಬಂಟ್ವಾಳ: ಸಾಲಮೇಳದ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದ ಜನಾರ್ಧನ ಪೂಜಾರಿಯವರ ಕಾನ್ಸೆಪ್ಟ್ ಅನ್ನು ಸರ್ಕಾರ ಅರ್ಥಮಾಡಿಕೊಂಡು, ಹೊಸ ಯೋಜನೆಗಳನ್ನು ರೂಪಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರು ಹೇಳಿದ್ದಾರೆ.
ಶುಕ್ರವಾರ ಸಂಜೆ ಕೇಂದ್ರದ ಮಾಜಿಸಚಿವ ಬಿ.ಜನಾರ್ಧನ ಪೂಜಾರಿಯವರನ್ನು ಬಸ್ತಿಪಡ್ಪುವಿನ ಮನೆಯಲ್ಲಿ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ , ರಾಜ್ಯ ಸರ್ಕಾರ 20 ಲಕ್ಷ ಕೋಟಿ, 1600 ಕೋಟಿ ಅನುದಾನ ಅನ್ನುವ ಪತ್ರಿಕಾ ಹೇಳಿಕೆಯನ್ನಷ್ಟೇ ನೀಡಿದೆ, ಆದರೆ ಯಾರೊಬ್ಬನಿಗೂ ಒಂದೇ ಒಂದು ರೂ ಅದರಿಂದ ನೆರವಾಗಿಲ್ಲ ಎಂದು ಆರೋಪಿಸಿದ ಅವರು, ರಾಷ್ಟ್ರ ಕಂಡ ಅತ್ಯುನ್ನತ ನಾಯಕ ಜನಾರ್ಧನ ಪೂಜಾರಿಯವರು ಸಾಲಮೇಳದ ಮೂಲಕ ಬ್ಯಾಂಕನ್ನೇ ಜನರ ಮನೆಬಾಗಿಲಿಗೆ ತಲುಪಿಸಿದ್ದರು. ಸಂಕಷ್ಟದ ಕಾಲದಲ್ಲಿ ಜನರಿಗೆ ಹೇಗೆ ಹಣ ಹಂಚಿಕೆಮಾಡಿನೆರವಾಗಬೇಕು ಎಂಬುದನ್ನು ಪೂಜಾರಿಯವರಿಂದ ಕಲಿಯಬೇಕು ಎಂದವರು ಹೇಳಿದರು. ಕೆಪಿಸಿಸಿ ಅಧ್ಯಕ್ಷರಾಗಿದ್ದ ಜನಾರ್ಧನ ಪೂಜಾರಿಯವರು ಪಕ್ಷ ಸಂಘಟನೆಗೂ , ನನಗೂ ಮಾರ್ಗದರ್ಶಕರು, ಹೀಗಾಗಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಅವರ ಭೇಟಿ ನನಗೂ ಖುಷಿಕೊಟ್ಟಿದೆ ಎಂದವರು ಹೇಳಿದರು.
ಡಿಕೆಶಿ ಬಿ.ಸಿ.ರೋಡಿಗೆ ಆಗಮಿಸುತ್ತಿದ್ದಂತೆಯೇ ಇಲ್ಲಿನ ಬ್ರಹ್ಮ ಶ್ರೀ ನಾರಾಯಣಗುರು ವೃತ್ತದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ನ ವತಿಯಿಂದ ಬೃಹತ್ ಸ್ವಾಗತ ನೀಡಲಾಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಯು.ಟಿ.ಖಾದರ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಹರೀಶ್ ಕುಮಾರ್,ಜಿಲ್ಲಾ ಯುವಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಮಾಜಿ ಸಂಸದ ವಿನಯಕುಮಾರ್ ಸೊರಕೆ, ಮಾಜಿಶಾಸಕರಾದ ಅಭಯಚಂದ್ರ ಜೈನ್, ಜೆ.ಆರ್.ಲೋಬೋ, ಪ್ರಮುಖರಾದ ಕಳ್ಳಿಗೆ ತಾರನಾಥ ಶೆಟ್ಟಿ, ಪಿ.ಸಿ.ಮೋಹನ್, ಜಿ.ಪಂ.ಸದಸ್ಯರಾದ ಪದ್ಮಶೇಖರ್ ಜೈನ್, ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಬ್ಲಾಕ್ ಅಧ್ಯಕ್ಷರಾದ ಬೇಬಿಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಮಲ್ಲಿಕಾ ಶೆಟ್ಟಿ, ಸದಾಶಿವ ಬಂಗೇರ, ವಾಸುಪೂಜಾರಿ, ವೆಂಕಪ್ಪ ಪೂಜಾರಿ, ಉಮ್ಮರ್ ಫಾರೂಕ್, ಸಂಜೀವ ಪೂಜಾರಿ, ಪ್ರಶಾಂತ್ ಕುಲಾಲ್, ಅಬ್ಬಾಸ್ ಅಲಿ, ಲುಕ್ಮಾನ್ ಜಗದೀಶ ಕುಂದರ್, ಗಂಗಾಧರ್, ಚಂದ್ರಶೇಖರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.