ಬೆಳ್ತಂಗಡಿ: ಮಕ್ಕಳ ಹುಟ್ಟು ಹಬ್ಬವೆಂದರೆ ಲೆಕ್ಕವಿಲ್ಲದಷ್ಟು ಹಣ ವ್ಯಯಿಸುವವರೆ ಹೆಚ್ಚಾಗಿರುವಾಗ ಬೆಳ್ತಂಗಡಿಯ ಸಂತೆಕಟ್ಟೆ ಬಳಿ ಕೋಟ್ಯಾನ್ ಟೈಲರಿಂಗ್ ಶಾಪ್ ಇಟ್ಟುಕೊಂಡು ತನ್ನದೇ ಆದ ಸಂಘಟನೆಯನ್ನು ಬೆಳೆಸಿ ಸಕ್ರಿಯವಾಗಿ ಸಮಾಜಮುಖಿ ಸೇವೆ ಮಾಡುತ್ತಾ ಯುವವಾಹಿನಿ ಬೆಳ್ತಂಗಡಿ ಘಟಕದ ಸಂಘಟನಾ ಕಾರ್ಯದರ್ಶಿಯಾಗಿರುವ ಸುರೇಂದ್ರ ಕೋಟ್ಯಾನ್ ರವರು ತನ್ನ ಪುತ್ರಿ ಮಲ್ಲಿಕಾ ಕೋಟ್ಯಾನ್ ರವರ 11ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಅನಗತ್ಯವಾಗಿ ಖರ್ಚು ಮಾಡದೇ ಒಂದು ತಿಂಗಳ ಹಿಂದೆ ಕೂಲಿ ಕೆಲಸ ಮಾಡುವ ಸಂದರ್ಭದಲ್ಲಿ ಮರದಿಂದ ಬಿದ್ದು ಬೆನ್ನುಮೂಳೆಗೆ ಗಂಭೀರವಾಗಿ ಗಾಯಗೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಈಗ ವಿಶ್ರಾಂತಿಯಲ್ಲಿರುವ ಬಡ ಕುಟುಂಬದ ವ್ಯಕ್ತಿಯನ್ನು ಆಯ್ಕೆ ಮಾಡಿ ಅವರಿಗೆ ಒಂದು ವಾರಕ್ಕೆ ಬೇಕಾದಷ್ಟು ತರಕಾರಿ ಮತ್ತು ದಿನಸಿ ಸಾಮಗ್ರಿಗಳನ್ನು ನೀಡಿ ತನ್ನ ಮಗಳ ಹುಟ್ಟುಹಬ್ಬದ ಜೊತೆಗೆ ಮಾನವೀಯತೆಯನ್ನು ಮೆರೆದು ಸಮಾಜಕ್ಕೆ ಆದರ್ಶರಾಗಿದ್ದಾರೆ.
ಗೇರುಕಟ್ಟೆ ಸಮೀಪದ ಕಳಿಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಜಲಡ್ಡ ಎಂಬಲ್ಲಿ ವಾಸವಾಗಿರುವ ವೀರಪ್ಪ ಪೂಜಾರಿಯವರ ಮಗ ಸಂದೀಪ್ ಪೂಜಾರಿಯವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು ಇವರನ್ನು ಆಶ್ರಯಿಸಿ ಅಜ್ಜಿ ಮತ್ತು ಚಿಕ್ಕಮ್ಮ ಮತ್ತು ಓರ್ವ ಸಹೋದರಿ ಇದ್ದಾರೆ. ಸಂದೀಪ್ ಪೂಜಾರಿಯವರು ಜೂ.29 ರಂದು ಪಕ್ಕದ ಮನೆಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಮರದಿಂದ ಆಯತಪ್ಪಿ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ನಡೆಯಲಿಕ್ಕೆ ಆಗದೆ ವಿಶ್ರಾಂತಿಯಲ್ಲಿದ್ದಾರೆ.
ಸಂದೀಪ್ ರವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿರ್ವೆರೆ ಕುಡ್ಲ ಇದರ ಗೇರುಕಟ್ಟೆ ವಲಯ ಅಧ್ಯಕ್ಷರಾದ ಯೋಗೀಶ್ ಸುವರ್ಣ, ರಂಗಭೂಮಿ ಕಲಾವಿದ ಪ್ರಕಾಶ್ ಸವಣಾಲು,ಬರಹಗಾರರಾದ ಸದಾನಂದ ಸಾಲಿಯಾನ್ ಬಳಂಜ, ಸುರೇಂದ್ರ ಕೋಟ್ಯಾನ್ ಉಷಾ ದಂಪತಿಗಳ ಪುತ್ರಿ ಮಲ್ಲಿಕಾ ಉಪಸ್ಥಿತರಿದ್ದರು.