ತಿರುವನಂತಪುರ: ಕೇರಳದ ತಿರುವನಂತಪುರದಲ್ಲಿ ಗರ್ಭಿಣಿ ಆನೆಗೆ ಸ್ಪೋಟಕ ತುಂಬಿದ ಅನಾನಸು ಹಣ್ಣನ್ನು ತಿನ್ನಲು ಕೊಟ್ಟು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ಮತ್ತೋರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೇರಳದ ಅರಣ್ಯ ಸಚಿವ ಕೆ. ರಾಜು ತಿಳಿಸಿದ್ದಾರೆ.
ವಿಶೇಷ ತನಿಖಾ ದಳ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಪಿ. ವಿಲ್ಸನ್ ಎಂಬಾತನನ್ನು ಬಂಧಿಸಿದ್ದು ಹೆಚ್ಚಿನ ಮಾಹಿತಿಯನ್ನು ಸಂಜೆಯ ವೇಳೆಗೆ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.
ವೆಲ್ಲಿಯಾರ್ ನದಿಯ ತಟದಲ್ಲಿದ್ದ ಅನನಾಸು ಹಣ್ಣನ್ನು ತಿನ್ನಲು ಹೋಗಿದ್ದ ಗರ್ಭಿಣಿ ಆನೆಯು ಸಾವನ್ನಪ್ಪಿತ್ತು. ಆನೆಗೆ ಗಂಭೀರ ಗಾಯಗಳಾಗಿ ನೋವು ಸಹಿಸಲಾಗದೆ ನೀರಿನಲ್ಲಿ ನಿಂತು ಸಾವನ್ನಪ್ಪಿತ್ತು.
ಅರಣ್ಯಾಧಿಕಾರಿ ಮೋಹನ್ ಕೃಷ್ಣನ್ ಎಂಬವರು ಈ ಬಗ್ಗೆ ಮೇ 27ರಂದು ತನ್ನ ಫೇಸ್ ಬುಕ್ ಖಾತೆಯಲ್ಲಿ ಘಟನೆಯ ಬಗ್ಗೆ ಮಾಹಿತಿ ನೀಡಿದ ಬಳಿಕ ಈ ವಿಷಯ ವೈರಲ್ ಆಗಿತ್ತು. ಈ ಬಗ್ಗೆ ಬಾಲಿವುಡ್ ತಾರೆಯರಿಂದ ಹಿಡಿದು ಹಲವಾರು ಗಣ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಆನೆಯ ಹತ್ಯೆ ವಿವಾದಕ್ಕೆ ಕಾರಣವಾಗಿದ್ದರಿಂದ ಮುಜುಗರಕ್ಕೊಳಗಾದ ಕೇರಳ ಸರ್ಕಾರ ಗುರುವಾರ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ.