ಲಾಯಿಲ: ಲಾಯಿಲ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಭವನದಲ್ಲಿ ಯಕ್ಷ ಸಾಂಗತ್ಯ ಸಪ್ತಕ ತಾಳಮದ್ದಳೆ “ಯಕ್ಷಾವತರಣ” ಕಾರ್ಯಕ್ರಮ ಕಲಾವಿದರ ಪೋಷಣೆಯೊಂದಿಗೆ ಕಲಾರಸಿಕರ ಅಭಿರುಚಿಗೆ ತಕ್ಕಂತೆ ಮೂಡಿಬರುತ್ತಿದೆ.
ಕೊರೊನಾ ಮಹಾಮಾರಿಯು ಕಲಾವಿದರ ಬದುಕನ್ನು ಅಸ್ತವ್ಯಸ್ತ ಮಾಡುವುದರೊಂದಿಗೆ ಕಲೆಯನ್ನು ಆಸ್ವಾದಿಸುವವರಿಗೂ ಅಡಚಣೆಯನ್ನು ಉಂಟು ಮಾಡಿದೆ. ಹಾಗಾಗಿ ಪ್ರೇಕ್ಷಕ ಹಾಗೂ ಕಲಾವಿದರ ನಡುವಿನ ಗೋಡೆಯನ್ನು ತೆಗೆದು ಹಾಕಲು ಯಕ್ಷಾವತರಣ ಎಂಬ ಕಾರ್ಯವನ್ನು ಆಯೋಜಿಸಿ ನೇರಪ್ರಸಾರದ ಮೂಲಕ ಮನೆಯಲ್ಲೇ ತಾಳಮದ್ದಳೆ ಆಲಿಸುವಂತಹ ಅವಕಾಶವನ್ನು ಮಾಡಿಕೊಟ್ಟಿದೆ.
ಬೆಳ್ತಂಗಡಿ ರೋಟರಿ ಕ್ಲಬ್, ಉಜಿರೆ ಕುರಿಯ ವಿಠ್ಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ, ಬೆಳ್ತಂಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ(ರಿ) ಇದರ ಸಹಭಾಗಿತ್ವದಲ್ಲಿ ಉಭಯ ತಿಟ್ಟುಗಳ ಕಲಾವಿದರ ಸಹಕಾರ ಹಾಗೂ ಡಾ.ಡಿ. ವೀರೇಂದ್ರ ಹೆಗ್ಗಡೆ ಯವರ ಕೃಪಾಶೀರ್ವಾದಗಳೊಂದಿಗೆ ಏಳು ದಿವಸದ ಯಕ್ಷಾವತರಣ ಎನ್ನುವ ತಾಳಮದ್ದಳೆ ಸಪ್ತಾಹವನ್ನು ಹಾಗು ಒಂದು ದಿನದ ಯಕ್ಷಗಾನ ನೃತ್ಯವನ್ನು ಹಮ್ಮಿಕೊಂಡಿದೆ.
ಸಮಯ ಸಂಜೆ 3.45 ರಿಂದ 6.30ರವರೆಗೆ ದಿನಕ್ಕೆ ಆರು ಕಲಾವಿದರಂತೆ 50 ಕಲಾವಿದರಿಗೆ ವೇದಿಕೆಯನ್ನು ನೀಡಿದೆ.
ಈ ಕಾರ್ಯಕ್ರಮಕ್ಕೆ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಶೋಕ್ ಭಟ್ ಉಜಿರೆ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.