Tuesday, April 16, 2024

ನೆಲಮುಚ್ಚಿಗೆ ಮತ್ತು ಸ್ವಾವಲಂಬನೆ

ನಮ್ಮ ಹಳ್ಳಿಗಳಲ್ಲೆಲ್ಲ ಮನೆಯಂಗಳವನ್ನು ಕಾಂಕ್ರೀಟ್, ಬ್ಲಾಕ್ಸ್ ಇತ್ಯಾದಿಗಳಿಂದ ಮುಚ್ಚುವ ಕಲ್ಪನೆಯೇ ನಮಗಿರಲಿಲ್ಲ. ಹೆಚ್ಚಿನಂಶ ಈ ಎರಡು ಹೆಸರುಗಳೇ ಆಗಿನ ಕಾಲದಲ್ಲಿ ಚಲಾವಣೆಯಲ್ಲಿ ಇರಲಿಲ್ಲ. ಇನ್ನೂ ಹೇಳಬೇಕೆಂದರೆ ಆ ವಸ್ತುಗಳೇ ಇರಲಿಲ್ಲವೋ ಅಥವಾ ಹಳ್ಳಿಗಳಿಗೆ ಅವುಗಳ ಧಾಳಿಯೇ ಆಗಿರಲಿಲ್ಲವೋ ಏನೊ. ಆಗ ಹೇಗಂದ್ರೆ ಪೂರ್ಣವಾಗಿ ಮಣ್ಣಿನದ್ದೇ ಅಂಗಳ. ಬೇಸಿಗೆ ಕಾಲ ಬಂದರೆ ಸಾಕು, ಪಿಕಾಸಿಯಲ್ಲಿ ಅಂಗಳವನ್ನು ಚೆನ್ನಾಗಿ ಅಗೆದುಹಾಕಿ, ಮಣ್ಣನ್ನು ಕಲಸಿ ಅದು ಒಣಗಿಕೊಂಡು ಬರುವಾಗ ಹೊಡಿಮಣೆಯಲ್ಲಿ ಚೆನ್ನಾಗಿ ಹೊಡೆದು ಸಮತಟ್ಟುಗೊಳಿಸುವುದು. ಒಂದು ವಾರದಲ್ಲಿ ಸೆಗಣಿ ಮತ್ತು ಮಸಿ ಬೆರಸಿ ಸಾರಿಸಿ ಸಮತಟ್ಟಾದ ಹಿಡಿಕಲ್ಲಿನಲ್ಲಿ ತಿಕ್ಕುವುದು. ಮುಂದಿನ ದಿನಗಳಲ್ಲಿ ನೀರು ಎಳೆದುಕೊಳ್ಳದ ಹಾಗೆ ಗೇರುಬೀಜದ ಎಣ್ಣೆಯ ಲೇಪನ ಮಾಡಿಬಿಟ್ಟರೆ ಈಗಿನ ಸಿಮೆಂಟಿನ ಹಾಗಲ್ಲದಿದ್ದರೂ ತಾತ್ಕಾಲಿಕವಾಗಿಯಾದರೂ ಘಟ್ಟಿಯಾಗಿರುತ್ತಿತ್ತು. ಬತ್ತ, ಅಡಕೆ, ತೆಂಗಿನಕಾಯಿ ಇತ್ಯಾದಿಗಳನ್ನು ಒಣಗಿಸಲು ಹಾಗೂ ಇತರೇ ಕೃಷಿ ಮತ್ತು ಬೇಸಾಯ ಸಂಬಂಧಿ ಕೆಲಸಕಾರ್ಯಗಳಿಗೆ ಇದು ಅನಿವಾರ್ಯವಾಗಿತ್ತು.


ನಾನು ಹೇಳಹೊರಟಿರುವುದು ಅಂದಿನ ಜನ ಎಷ್ಟರಮಟ್ಟಿಗೆ ಸ್ವಾವಲಂಬಿಗಳಾಗಿದ್ದರು ಅನ್ನುವುದನ್ನು. ಮಳೆಗಾಲ ಬಂದರೆ ಸಾಕು, ಅಂಗಳ ತುಂಬ ಅಡಕೆ ಮರದ ಸೋಗೆ, ತರಗೆಲೆ, ಬೈಹುಲ್ಲು ಹಾಗೂ ಇತರೇ ಕಸಕಡ್ಡಿಗಳನ್ನು ದಪ್ಪವಾಗಿ ಹರಡಿಬಿಡುವುದು. ಇದನ್ನು ‘ನೆಲಮುಚ್ಚಿಗೆ’ ಎಂದು ಕರೆಯುತ್ತಾರೆ. ಅದು ಮಳೆಗೆ ಕೊಳೆಯುವಷ್ಟರಲ್ಲಿ ಉದ್ದು, ಹೆಸರು, ಅವರೆ ಇತ್ಯಾದಿಗಳನ್ನು ಅದರ ಮೇಲೆ ಹಾರಿಸಿಬಿಡುವುದು. ನಿಗದಿತ ಅವಧಿಗನುಗುಣವಾಗಿ ಸುಡುಮಣ್ಣು, ಬೂದಿ, ಸೆಗಣಿಪುಡಿ ಇತ್ಯಾದಿಗಳನ್ನು ಅದರ ಮೇಲೆ ಪ್ರಸರಿಸಿಬಿಟ್ಟರೆ ಅಲ್ಲಿಗೆ ಅದರ ಲಾಲನೆ ಪಾಲನೆ ಮುಗಿಯಿತು. ಮಳೆಗಾಲ ಕೊನೆಗೊಳ್ಳುತ್ತಿದ್ದಂತೆ ಕೊಯಿಲಿಗೆ ಬರುವ ಈ ಧಾನ್ಯಗಳು ಅವರ ವಾರ್ಷಿಕ ಖರ್ಚಿಗೆ ಸಾಕಾಗುತ್ತಿತ್ತು. ಇದು ಸ್ವಾವಲಂಬನೆಯೂ ಹೌದು ಜತೆಯಲ್ಲಿ ಅಂಗಳವೂ ಸುಸ್ಥಿಯಲ್ಲಿರುತ್ತದೆ. ಆಶ್ಚರ್ಯವೆಂದರೆ, ಇದೊಂದು ನೀರಿಂಗಿಸುವ ವಿಧಾನವೂ ಹೌದೆಂಬುದನ್ನು ಗಮನಿಸಬೇಕು. ಕೃಷಿಕನೊಬ್ಬ ತನಗೆ ಅರಿವಿಲ್ಲದೆಯೇ ಈ ನೆಲಮುಚ್ಚಿಗೆಯ ಮೂಲಕ ಓಡಿಹೋಗುವ ಮಳೆನೀರನ್ನು ತೆವಳುವಂತೆ, ತೆವಳಿಹೋಗುವ ನೀರನ್ನು ನಿಲ್ಲುವಂತೆ ಮಾಡಿ ನೀರು ಇಂಗಿಸುವ ಪ್ರಕ್ರಿಯೆಯಲ್ಲಿ ತನ್ನನ್ನು ತಾನು ಪರೋಕ್ಷವಾಗಿ ತೊಡಗಿಸಿಕೊಳ್ಳುತ್ತಾನೆ. ಇದರಿಂದಾಗಿ ಸುತ್ತುಮುತ್ತಲ ಕೆರೆ ಬಾವಿಗಳಲ್ಲಿ ನೀರಿನ ಒಸರು ಅಧಿಕಗೊಂಡು ನೀರಿಗಾಗಿ ಬೇರೆಯವರಿಗೆ ಅಂಗಲಾಚುವ ಸ್ಥಿತಿ ಆತನಿಗಿರುವುದಿಲ್ಲ. ಇದೂ ಕೂಡಾ ಒಂದು ರೀತಿಯಲ್ಲಿ ಸ್ವಾವಲಂಬನೆಯೇ. ಈವತ್ತಿನ ಆಧುನಿಕ ಯುಗದಲ್ಲಂತೂ ಇವೆಲ್ಲವೂ ಕೇವಲ ಕನಸು. ಬಾಯಾರಿದ ನೆಲಕ್ಕೆ ವಂಚಿಸುತ್ತಿರುವ ನಾವು ಎಲ್ಲಿಯೂ ನೀರನ್ನು ನಿಲ್ಲಲು ಬಿಡದೆ ನೇರವಾಗಿ ಸಮುದ್ರವನ್ನೇ ಸೇರುವಂತಹ ಸ್ಥಿತಿಯನ್ನು ಕಲ್ಪಿಸಿದ್ದೇವೆ. ನೀರುಹೋಗುವ ಕಣಿವೆಗಳು, ಮದಕಗಳು, ಹುಲ್ಲುಗಾವಲುಗಳು, ಗೋಚರಗಳು, ಶೋಲಾ ಕಾಡುಗಳು ಇವೆಲ್ಲವನ್ನೂ ಹಾಳುಗೆಡಹಿದ್ದೇವೆ. ಭೂಮಿಗೆ ಇನ್ನೆಲ್ಲಿಯ ನೀರು ಸೇರಬೇಕು? ಜಲಮಟ್ಟ ಮಟ್ಟ ಏರುವುದಾದರೂ ಹೇಗೆ ಸಾಧ್ಯ?

✍️ರಾಜಮಣಿ ರಾಮಕುಂಜ

More from the blog

ಅಪಘಾತ ವಿಚಾರದಲ್ಲಿ ಗಂಡ ಹೆಂಡತಿಗೆ ನಾಲ್ವರು ಹಲ್ಲೆ : ಬಜರಂಗದಳ, ವಿ.ಹಿಂ.ಪರಿಷತ್ ಕಲ್ಲಡ್ಕ ಪ್ರಖಂಡದಿಂದ ಖಂಡನೆ

ಬಂಟ್ವಾಳ: ಅಪಘಾತ ವಿಚಾರದಲ್ಲಿ ಗಂಡ ಹೆಂಡತಿಗೆ ನಾಲ್ವರು ಹಲ್ಲೆ ನಡೆಸಿದ ಘಟನೆ ಕಲ್ಲಡ್ಕದ ಕರಿಂಗಾನ ಕ್ರಾಸ್ ಎಂಬಲ್ಲಿ ಸಂಜೆ ವೇಳೆ ನಡೆದಿದೆ. ಪುತ್ತೂರು ಏರ್ಮುಂಜ ಪಲ್ಲ ನಿವಾಸಿಗಳಾದ ಮಂಜುನಾಥ್ ಮತ್ತು ಅವರ ಪತ್ನಿ ಪೂರ್ಣಿಮಾ...

ಲೋಕಸಭಾ ಚುನಾವಣೆ : ಮತಯಂತ್ರಗಳ ಕಮಿಷನಿಂಗ್‌ ಕಾರ್ಯ…. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು. ಈ ಸಂದರ್ಭದಲ್ಲಿ...

ಯುವಮೋರ್ಚಾ ಬಂಟ್ವಾಳ ವತಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಿ. ಸಿ ರೋಡಿನ ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ

ಯುವಮೋರ್ಚಾ ಬಂಟ್ವಾಳ ವತಿಯಿಂದ ನರೇಂದ್ರ ಮೋದಿ ಮತೊಮ್ಮೆ ಪ್ರಧಾನಿಯಾಗಲೆಂದು ರಕ್ತೇಶ್ವರಿ ದೇವಸ್ಥಾನ ಬಿ. ಸಿ ರೋಡಿನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಆಯತಪ್ಪಿ ಬಾವಿಗೆ‌ ಬಿದ್ದ ಮಹಿಳೆ… ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ

ಮಂಗಳೂರು: ಬಾವಿಯಿಂದ ನೀರು ಸೇದುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯೋರ್ವರನ್ನು ಗುರುವಾರ ಕದ್ರಿ ಅಗ್ನಿಶಾಮಕ ಠಾಣೆಯವರು ರಕ್ಷಿಸಿದ್ದಾರೆ ಬಿಕ್ಕರ್ನಕಟ್ಟೆ ಸಮೀಪದ ನಿವಾಸಿ ಟ್ರೆಸ್ಸಿ ಡಿಸೋಜಾ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ ಮಹಿಳೆ. ಸಂಜೆ 5 ಗಂಟೆ...