Sunday, October 22, 2023

ಮಹಾರಾಷ್ಟ್ರದ ಕನ್ನಡಿಗರಿಗೆ ಊರಿಗೆ ಬರಲು ಅವಕಾಶ ನೀಡುವಂತೆ ರಮಾನಾಥ ರೈ ಒತ್ತಾಯ

Must read

 

ಬಂಟ್ವಾಳ, ಮೇ ೭: ಮುಂಬಯಿ ಸೇರಿದಂತೆ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಬಾಕಿಯಾಗಿರುವ ಕನ್ನಡಿಗರಿಗೆ ಊರಿಗೆ ಬರುವುದಕ್ಕೆ ಅವಕಾಶ ಮಾಡಿ, ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
ಗುರುವಾರ ಬಿ.ಸಿ.ರೋಡಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಕನ್ನಡಿಗರು ಉದ್ಯೋಗದೊಂದಿಗೆ ಬದುಕು ಕಟ್ಟಿಕೊಂಡಿದ್ದು, ಪ್ರಸ್ತುತ ಅವರು ಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸ್ತುತ ಅವರ ಕಷ್ಟಕ್ಕೆ ನೆರವಾಗುವುದು ಸರಕಾರದ ಕರ್ತವ್ಯವಾಗಿದ್ದು, ಅವರು ಊರಿಗೆ ಬರಲು ಅನುಮತಿ ನೀಡಬೇಕು. ಊರಿಗೆ ಬರುವ ಬಸ್ಸಿನ ವ್ಯವಸ್ಥೆಗಳನ್ನು ಕೂಡ ಅವರೇ ಕೈಗೊಂಡಿದ್ದಾರೆ.
ಊರಿಗೆ ಬರುವ ವೇಳೆ ಆರೋಗ್ಯ ತಪಾಸಣೆ, ಇಲ್ಲಿ ಕ್ವಾರಂಟೈನ್ ಸೇರಿದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಸರಕಾರ ಕೈಗೊಳ್ಳಲಿ. ಈಗಾಗಲೇ ಅವರು ಇಲ್ಲಿನ ಪ್ರಮುಖರಿಗೆ ಮನವಿ ಮಾಡಿದ್ದು, ತನಗೂ ಕರೆ ಮಾಡಿ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಸರಕಾರ ಈ ಕುರಿತು ಗಮನಹರಿಸಬೇಕು ಎಂದು ತಾನು ಒತ್ತಾಯಿಸುತ್ತಿದ್ದೇನೆ ಎಂದರು. ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷರಾದ ಬೇಬಿ ಕುಂದರ್ ಹಾಗೂ ಸುದೀಪ್‌ಕುಮಾರ್ ಶೆಟ್ಟಿ ಜತೆಗಿದ್ದರು.

More articles

Latest article