ಬೆಂಗಳೂರು: ಸೋಂಕು ನಿಯಂತ್ರಣ ಭಾಗವಾಗಿ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾದ ಬಳಿಕ ಸೋಂಕಿನ ಲಕ್ಷಣ ಕಂಡು ಬರದಿದ್ದಲ್ಲಿ ಅಂತಹ ವ್ಯಕ್ತಿಗಳನ್ನು ಹೋಂಕ್ವಾರಂಟೈನ್ಗೆ ಒಳಪಡಿಸಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.
ಕೊರೊನಾ ಸೋಂಕು ಪ್ರಕರಣಗಳು ಅಧಿಕವಾಗುತ್ತಿರುವ ಕಾರಣ ಸೋಂಕಿತರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಿವುದು ಕಷ್ಟವಾಗುವ ಹಿನ್ನೆಲೆ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕ್ವಾರಂಟೈನ್ ಅವಧಿಯನ್ನು 7 ದಿನಕ್ಕೆ ಇಳಿಕೆ ಮಾಡಲಾಗಿದೆ.
ಈ ಬಗ್ಗೆ ಅಧಿಸೂಚನೆ ಜಾರಿಯಾಗಿದ್ದು, ಏಳು ದಿನದ ನಂತರ ಕೊರೊನಾ ಸೋಂಕಿನ ಲಕ್ಷಣಗಳು ಇಲ್ಲದಿದ್ದರೆ ಅಂತಹ ವ್ಯಕ್ತಿಗಳನ್ನು ಆರ್.ಟಿ.ಪಿ.ಸಿ.ಆರ್ ಕೊರೊನಾ ಪರೀಕ್ಷೆ ಮಾಡದೇ ಥರ್ಮಲ್ ಸ್ಕ್ರೀನಿಂಗ್ ಮಾಡಿ ಹೋಂಕ್ವಾರಂಟೈನ್ಗೆ ಕಳುಹಿಸಬಹುದು ಎಂದು ತಿಳಸಿದೆ.
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ, ಶ್ವಾಸಕೋಶ ಸಮಸ್ಯೆಗಳಿದ್ದಲ್ಲಿ ಅಂತಹವರನ್ನು ಹೋಂ ಕ್ವಾರೆಂಟೈನ್ ಗೆ ಒಳಪಡಿಸಬಹುದು. ಹೋಂಕ್ವಾರಂಟೈನ್ಗೆ ಒಳಪಡುವವರು ಕಡ್ಡಾಯಾಗಿ ಮನೆಯಲ್ಲಿ ಇರಬೇಕು. ಇದರೊಂದಿಗೆ ಕೈಗೆ ಮುದ್ರೆ ಒತ್ತಿ ಕಳುಹಿಸಬೇಕು. ಅಲ್ಲದೇ ವಾಚ್ ಆ್ಯಪ್ನಲ್ಲಿ ಹೆಸರು ನೋಂದಾವಣೆ ಮಾಡಿಸಿಕೊಳ್ಳುವುದು ಕೂಡಾ ಕಡ್ಡಾಯ ಎಂದು ಹೇಳಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಲಕ್ಷಾಂತರ ಮಂದಿ ಆಗಮಿಸುತ್ತಿದ್ದು, ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸುವುದು ಸವಾಲಾಗಿದೆ. ತನ್ನ ಮಾರ್ಗಸೂಚಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಪಾಡು ಮಾಡಿದ್ದು, ಈಗ ಸಾಂಸ್ಥಿಕ ಕ್ವಾರಂಟೈನ್ ಅವಧಿಯನ್ನು ಶೇ. 50 ರಷ್ಟು ಇಳಿಕೆ ಮಾಡಿದೆ.