Wednesday, October 18, 2023

ಭಕ್ತಿ

Must read

ವೇದದ ಉಗಮವು ಅರುಹಿದ ಸಂವೇದ್ಯ
ಆಶಾವಾದದ ತುಣುಕು….
ಆತ್ಮ- ಪರಮಾತ್ಮಗಳ ಮಿಲನ ಸಾರ್ವಕಾಲಿಕ
ಸತ್ಯದ ಬೆಳಕು….

ಒಪ್ಪಿದ ತುಪ್ಪದ ದೀಪ ಜಂಜಡವ ಉಡುಗಿಸಿ
ಬಿಡಿಸಿದರೆ ದಿಗ್ಬಂಧನ….
ಸಮ್ಯಕ್ ಜ್ಞಾನದ ಪರಿಧಿ ಭವದೊಳು
ಬೆಸೆಯುವುದು ಆತ್ಮಬಂಧನ….

ತೇಯ್ದು ನಲುಗಿರುವ ಶ್ರೀಗಂಧದ ಕೊರಡು
ಸುವಾಸನೆಯ ಪಸರಿಸಲು….
ಉಳಿಪೆಟ್ಟು ಪಡೆದ ಕಲ್ಲು ಜಗವಾಳುವ
ಒಡೆಯನಾಗಿ ರೂಪುಗೊಳ್ಳಲು….

ಕರ್ಮಫಲದ ತಿರುವುಗಳ ಹುಟ್ಟಡಗಿಸಲು
ಪಾರವಿಲ್ಲದ ಧ್ಯಾನ…
ತೃಣಮಪಿ ಜಗದೊಳು ಇಹಪರ ಭಕುತಿಯಲಿ
ಸುಖದ ಆಲಿಂಗನ….

ತತ್ತರ ಬದುಕಿನಲಿ ಪುಟಿದೇಳಲು ಭಕ್ತಿಯೆಂಬ
ಭಾವಪರತೆಯ ನೋಟ….
ಬ್ರಹ್ಮಲಿಖಿತ ಪುಟದೊಳು ನಿರ್ಮಲ ಮನಕೆ
ಸತ್ಯದರ್ಶನದ ಪಾಠ….

ಭಕ್ತಿಯ ಧರಾತಲದಿ ಗುರುವೆಂಬ ಬೀಜದಿಂದ
ಫಲ ತೂಗಲದು ಸಮ್ಮತ….
ಭಕ್ತ ಭಗವಂತನ ಸಾಮಿಪ್ಯದ ಸೀಮೆ
ಐತಿಹ್ಯವಾಗಲು ಒಮ್ಮತ….

@ತುಳಸಿ ಕೈರಂಗಳ್

More articles

Latest article