


ಬಂಟ್ವಾಳ : ರವಿವಾರ ತಡರಾತ್ರಿಯಿಂದ ನಿರಂತರವಾಗಿ ಸುರಿದ ಧಾರಾಕಾರ ಮಳೆಯ ಪರಿಣಾಮ ಬಿ.ಸಿ.ರೋಡು-ಜಕ್ರಿಬೆಟ್ಟು ಹೆದ್ದಾರಿಯ ಕಾಮಗಾರಿ ನಾನಾ ಸಮಸ್ಯೆಗಳನ್ನು ಸೃಷ್ಟಿಸಿದ್ದು, ಅನೇಕ ಮನೆಗಳಿಗೆ ಕೆಸರು ನೀರು ನುಗ್ಗಿದೆ.
ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆಯನ್ನು ಅಗೆದು ಹಾಕಲಾಗಿದ್ದು, ಬಹುತೇಕ ಕಡೆ ಚರಂಡಿಯಿಲ್ಲದೆ ನೀರು ಹಾಗೂ ಮಣ್ಣು ಸ್ಥಳೀಯ ಮನೆಗಳಿಗೆ ನುಗ್ಗಿತ್ತು.
ಹೆಚ್ಚಿನ ಕಡೆಗಳಲ್ಲಿ ರಸ್ತೆಯನ್ನು ಎತ್ತರಗೊಳಿಸುವ ಉದ್ದೇಶದಿಂದ ಮಣ್ಣು ತುಂಬಿಸಲಾಗಿದ್ದು, ಇನ್ನೂ ತಡೆಗೋಡೆ ನಿರ್ಮಾಣವಾಗಿಲ್ಲ. ಹೀಗಾಗಿ ಮಳೆನೀರು ಹರಿದು ಹೋಗುವುದಕ್ಕೆ ಚರಂಡಿಯಿಲ್ಲದೆ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುತ್ತಿದೆ. ಹೀಗಾಗಿ ಹೆಚ್ಚಿನ ಮನೆಗಳ ಅಂಗಳದಲ್ಲಿ ಕೆಸರು ತುಂಬಿಕೊಂಡಿದೆ.
ಬಿ.ಸಿ.ರೋಡು ಸಮೀಪದ ಮಯ್ಯರಬೈಲು ಬಳಿ ಮನೆಯೊಂದರ ಅಂಗಳಕ್ಕೆ ಪೂರ್ತಿ ಕೆಸರು ನುಗ್ಗಿ ತೊಂದರೆಯಾಗಿದ್ದು, ಪಕ್ಕದ ದೈವಸ್ಥಾನದ ಆವರಣದಲ್ಲೂ ನೀರು ತುಂಬಿದೆ. ಈ ಕುರಿತು ಹೆದ್ದಾರಿ ಇಲಾಖೆಯ ಸಂಬಂಧಪಟ್ಟ ಎಂಜಿನಿಯರ್ಗೆ ಮಾಹಿತಿ ನೀಡಲಾಗಿದ್ದು, ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ್ದಾರೆ.
ಜಕ್ರಿಬೆಟ್ಟುನಲ್ಲಿ ಪ್ರಸ್ತುತ ತೋಡಿನಲ್ಲಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯಲ್ಲಿ ವಾಹನಗಳ ಸಾಗುತ್ತಿದ್ದು, ಮಳೆಗಾಲಕ್ಕೆ ಮುಂಚಿತವಾಗಿ ನೂತನ ಸೇತುವೆಯ ಸಂಪರ್ಕ ರಸ್ತೆಯ ಕಾಮಗಾರಿ ಮುಗಿಯಬೇಕಿದೆ.
ಈ ಹೆದ್ದಾರಿಯು ಪುಂಜಾಲಕಟ್ಟೆವರೆಗೆ ಅಭಿವೃದ್ಧಿಗೊಳ್ಳುತ್ತಿದ್ದು, ಅಲ್ಲೂ ಹೆಚ್ಚಿನ ಕಡೆಗಳಲ್ಲಿ ಮಳೆಯಿಂದ ತೊಂದರೆ ಉಂಟಾಗಿದೆ. ಮೂರ್ಜೆಯಲ್ಲಿ ಹೆದ್ದಾರಿಯಲ್ಲೇ ಪ್ರವಾಹದ ರೀತಿಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗಿತ್ತು. ಬಳಿಕ ಜೆಸಿಬಿಗಳ ಮೂಲಕ ಚರಂಡಿ ಅಗೆದು ನೀರು ಹರಿದು ಹೋಗುವುದಕ್ಕೆ ವ್ಯವಸ್ಥೆ ಮಾಡಲಾಯಿತು.


