ಬಂಟ್ವಾಳ: ಬರಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಪಡಿತರ ಚೀಟಿ ವಂಚಿತ ಕುಟುಂಬಗಳಿಗೆ ಅಕ್ಕಿ ನೀಡುವುದಾಗಿ ಶಾಸಕ ರಾಜೇಶ್ ನಾಯ್ಕ್ ರವರು ಬರಿಮಾರು ಗ್ರಾಮ ಪಂಚಾಯತ್ ನ ಕೋವಿಡ್-19 ಕಾರ್ಯಪಡೆಯ ಸಭೆಯಲ್ಲಿ ಭರವಸೆ ನೀಡಿದ್ದರು. ಅದರಂತೆ, ಬರಿಮಾರು ಗ್ರಾಮಪಂಚಾಯತ್ ನ ಸದಸ್ಯರು ತಮ್ಮ ವಾರ್ಡ್ ಗಳಲ್ಲಿನ ಪಡಿತರ ಚೀಟಿ ವಂಚಿತ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸಿ ತಾ.ಪಂ ಕಾರ್ಯ ನಿರ್ವಹಣಾಧಿಕಾರಿಯವರ ಮೂಲಕ ಶಾಸಕರಿಗೆ ಕಳುಹಿಸಿಕೊಡಲಾಗಿತ್ತು. ಪಟ್ಟಿ ತಲುಪಿದ ಮೂರು ದಿನಗಳೊಳಗೆ ಇದಕ್ಕೆ ಸ್ಪಂದಿಸಿದ ಶಾಸಕರು ಬರಿಮಾರು ಗ್ರಾಮದ ಪಡಿತರ ಚೀಟಿ ವಂಚಿತ ಕುಟುಂಬಗಳಿಗೆ ತಲಾ ಹತ್ತು ಕೆ.ಜಿ ಯ ಅಕ್ಕಿಯ ಚೀಲಗಳನ್ನ ಗ್ರಾಮ ಪಂಚಾಯತ್ ಮೂಲಕ ನೀಡಲು ಕಳುಹಿಸಿಕೊಟ್ಟಿದ್ದರು. ಅಕ್ಕಿಯ ಚೀಲಗಳನ್ನು ಬರಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಪಟ್ಲಕೋಡಿ ಮತ್ತು ಗ್ರಾಮ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಗ್ರಾಮದ 19 ಪಡಿತರ ಚೀಟಿ ವಂಚಿತ ಕುಟುಂಬಗಳಿಗೆ ಬರಿಮಾರು ಗ್ರಾಮ ಪಂಚಾಯತ್ ಕಛೇರಿಯಲ್ಲಿ ಹಂಚಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೇ ಅನಿತಾ, ಸದಸ್ಯರಾದ ಗಣೇಶ, ಕಲಾವತಿ, ಜಯಂತ ಹಾಗೂ ಹರಿಕೃಷ್ಣ ಉಪಸ್ಥಿತರಿದ್ದು ತಮ್ಮ ವಾರ್ಡ್ ಗಳಿಗೆ ಸಂಬಂಧಿಸಿದ ಕುಟುಂಬಗಳಿಗೆ ಅಕ್ಕಿಯನ್ನು ವಿತರಿಸಿದರು.