ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಮತ್ತು ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮವನ್ನು ಸಂಪರ್ಕಿಸುವ ನೇತ್ರಾವತಿ ನದಿ ಕಿನಾರೆಯ ಕೂಟೇಲು ಎಂಬಲ್ಲಿ ಹತ್ಯೆಗೈದ ಗೋವಿನ ತ್ಯಾಜ್ಯ ವಸ್ತುಗಳನ್ನು ಸೇತುವೆಯಲ್ಲಿ ಎಸೆದ ಘಟನೆ ನಡೆದಿದೆ.
ಮಂಗಳೂರಿಗರು ಕುಡಿಯಲು ಬಳಸುವ ನೇತ್ರಾವತಿ ನದಿ ನೀರಿಗೆ ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಸೋಮವಾರ ಸಂಜೆ ಸೇತುವೆಯಿಂದ ಹಾದು ಹೋಗುವಾಗ ವಾಸನೆ ಬಡಿದಾಗ ಸೇತುವೆ ಬಳಿ ಸ್ಥಳಿಯರಾದ ಸಂತೋಷ್ ಕುಲಾಲ್, ಅಭಿಷೇಕ್ ಮತ್ತು ಸವ್ಯರಾಜ್ ಶೋಧ ಕಾರ್ಯ ಪ್ರಾರಂಭಿಸಿದರು. ಸೇತುವೆಯ ತಳ ಭಾಗಕ್ಕೆ ತೆರಳಿದ ಅವರಿಗೆ ಕಂಡದ್ದು, ಕಡಿದ ದನದ ಕಾಲುಗಳು, ಕೆಚ್ಚಲು ಮತ್ತು ತ್ಯಾಜ್ಯಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು. ತಕ್ಷಣ ಬಜರಂಗದಳದ ಮಣಿನಾಲ್ಕೂರು ಜೈ ಹನುಮಾನ್ ಶಾಖೆಯ ಪ್ರಮುಖರು ಒಟ್ಟು ಸೇರಿ ಗಡಿಪ್ರದೇಶವಾದ್ದರಿಂದ ಎರಡೂ ಠಾಣೆಗಳಾದ ಉಪ್ಪಿನಂಗಡಿ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಿಗೆ ವಿಷಯ ತಿಳಿಸಿದ್ದು, ತಕ್ಷಣ ಉಭಯ ಠಾಣೆಗಳಿಂದ ಆಗಮಿಸಿದ ಆರಕ್ಷಕ ಅಧಿಕಾರಿಗಳು ಸ್ಥಳ ಮಹಜರು ನಡೆಸಿದಾಗ ಅದು ಬಂಟ್ವಾಳ ಗ್ರಾಮಾಂತರದ ಆರಕ್ಷಕ ಠಾಣೆಗೆ ಸಂಬಂಧಿಸಿರುವುದರಿಂದ ಈ ಬಗ್ಗೆ ಅಲ್ಲಿ ಖಾಸಗಿ ದೂರು ನೀಡಲಾಗಿದೆ.
ವಿಶ್ವ ಹಿಂದೂ ಪರಿಷತ್ ಪ್ರಮುಖ ಸರಪಾಡಿ ಅಶೋಕ್ ಶೆಟ್ಟಿ ಮಾತನಾಡಿ, ಉಭಯ ತಾಲೂಕಿನ ಗಡಿ ಪ್ರದೇಶವಾಗಿರುವ ಈ ಜಾಗ ಗೋ ಹಂತಕರಿಗೆ ಹೇಳಿ ಮಾಡಿಸಿದಂತಾಗಿದ್ದು, ಈ ಸೇತುವೆ ಬಳಿ ಸಿ.ಸಿ.ಕ್ಯಾಮರಾ ಕಣ್ಗಾವಲು ಅಳವಡಿಸಬೇಕು. ಗೋ ಹತ್ಯೆಗೈದು ಮಾಂಸ ಮಾಡುವ ದಂಧೆ ನಡೆಸಿದ ಪಾತಕಿಗಳನ್ನು ತಕ್ಷಣ ಬಂಧಿಸಬೇಕು. ಇಲ್ಲದೇ ಇದ್ದರೆ ಮುಂದಕ್ಕೆ ಯಾವುದೇ ಸಂದರ್ಭ ಈ ವಿಚಾರವಾಗಿ ಗಲಭೆ ನಡೆಯಬಹುದು ಎಂದು ಎಚ್ಚರಿಸಿದರು.