Wednesday, October 18, 2023

ಮಾಣಿಲ ನ್ಯಾಯಬೆಲೆ ಅಂಗಡಿಗೆ ತಹಸೀಲ್ದಾರ್ ಭೇಟಿ: ಸಮಸ್ಯೆಗಳಿಗೆ ಪರಿಹಾರ ಸೂಚನೆ

Must read

ವಿಟ್ಲ: ಪಡಿತರ ಫಲಾನುಭವಿಗಳಿಗೆ ಅನುಕೂಲಕರವಾಗುವಂತೆ ಸರಕಾರದ ಆದೇಶವಿದ್ದರೂ ಓಟಿಪಿ ಇಲ್ಲದೆ ಪಡಿತರ ವಿತರಣೆ ಮಾಡದ ಮಾಣಿಲ ನ್ಯಾಯಬೆಲೆ ಅಂಗಡಿಗೆ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್. ಆರ್. ಅವರು ಸಾರ್ವಜನಿಕರ ದೂರಿನ ಮೇಲೆ ಭೇಟಿ ನೀಡಿ ಆಹಾರ ಇಲಾಖೆಯ ಪಡಿತರ ವಿತರಣೆಯ ಪಟ್ಟಿ ಅನುಗುಣವಾಗಿ ಜನರಿಗೆ ತ್ವರಿತವಾಗಿ ಪಡಿತರ ಸಿಗುವಂತೆ ನ್ಯಾಯಬೆಲೆ ಅಂಗಡಿ ಸಿಬ್ಬಂದಿಗಳಿಗೆ ಆದೇಶಿಸಿದರು.
ಮಾಣಿಲ ನ್ಯಾಯ ಬೆಲೆ ಅಂಗಡಿಯಲ್ಲಿ ಸರಕಾರಿ ಆದೇಶವನ್ನು ಪಾಲಿಸದೇ ಅಂಗಡಿಯನ್ನು ಬೆಳಗ್ಗೆ 10 ಗಂಟೆ ತೆರೆದಿದ್ದಲ್ಲದೇ ಜನರಿಗೆ ಓಟಿಪಿ ಇಲ್ಲದೆ ಪಡಿತರ ನೀಡುತ್ತಿರಲಿಲ್ಲ. 50 ಟೋಕನ್ ನೀಡಿ ಉಳಿದವರನ್ನು ಹಿಂತಿರುಗಿ ಕಳುಹಿಸುವ ಕಾರ್ಯವನ್ನು ಮಾಡಿದ್ದರು. ಇದರಿಂದ ಹಲವಾರು ಮಂದಿ ಪಡಿತರ ಇಲ್ಲದೇ ಹಿಂದಿರುಗಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ದೂರಿನ ಹಿನ್ನಲೆಯಲ್ಲಿ ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿ ಜನರಿಗೆ ಸೂಕ್ತ ರೀತಿಯಲ್ಲಿ ಪಡಿತರ ಸಿಗುವಂತೆ ವ್ಯವಸ್ಥೆ ಕಲ್ಪಿಸಿದರು.
ವಾಹನಗಳು ಅಂಗಡಿ ಆವರಣಕ್ಕೆ ಬರಬಾರದೆಂದು ಗೇಟ್‍ಗೆ ಬೀಗ ಹಾಕಿ ಜನರು ಎರಡು ತಿಂಗಳ ಪಡಿತರದ ಅಕ್ಕಿಹೊರೆಯನ್ನು ಮೆಟ್ಟಲಲ್ಲಿ ತಲೆಯಲ್ಲೇ ಹೊತ್ತು ಹೋಗಬೇಕಾದ ಪರಿಸ್ಥಿತಿಯನ್ನೂ ನಿರ್ಮಾಣವಾಗಿತ್ತು. ತಹಸೀಲ್ದಾರ್ ಜೊತೆ ಕಂದಾಯ ನಿರೀಕ್ಷಕರಾದ ದಿವಾಕರ್, ಮಾಣಿಲ ಗ್ರಾಮ ಕರಣಿಕರಾದ ಶಿವಾನಂದ, ಅಳಿಕೆ ಗ್ರಾಮ ಕರಣಿಕ ಸತೀಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಸ್ಥಳಕ್ಕೆ ಆಗಮಿಸಿ ಜನರ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡು, ಸ್ಥಳದಲ್ಲಿಯೇ ಬಗೆಹರಿಸಿದರು.

More articles

Latest article