ಮಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಕೊಂಚ ಸಡಿಲಿಕೆ ಮಾಡಿದ್ದು, ಆದರೆ ಕೊರೊನಾ ಪೀಡಿತ ಕೆಲವು ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ. ಆ ಜಿಲ್ಲೆಗಳಲ್ಲಿ ಯಾವುದೇ ವಿನಾಯಿತಿಗಳು ಅನ್ವಯವಾವುದಿಲ್ಲ.
ಇಂದು ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಿ.ಎಂ. ಬಿ.ಎಸ್.ವೈ. ಗ್ರೀನ್ ಝೋನ್ ನಲ್ಲಿರುವ ಜಿಲ್ಲೆಗಳಿಗೆ ವಿನಾಯಿತಿ ನೀಡಿದ್ದಾರೆ. ಈ ಕುರಿತಾದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
ದಕ್ಷಿಣ ಕನ್ನಡ, ಕಲಬುರ್ಗಿ, ಬೆಂಗಳೂರು ನಗರ, ಮೈಸೂರು, ವಿಜಯಪುರ, ಬಾಗಲಕೋಟೆ, ಬೀದರ್ , ಬೆಳಗಾವಿ ಜಿಲ್ಲೆಗಳಲ್ಲಿ ಈ ವಿನಾಯಿತಿ ಅನ್ವಯವಾಗದೆ ಯಥಾಸ್ಥಿತಿ ಮುಂದುವರಿಯಲಿದೆ.
ಗ್ರೀನ್ ಝೋನ್ ನಲ್ಲಿರುವ 13 ಜಿಲ್ಲೆಗಳಾದ ಉಡುಪಿ, ಕೊಡಗು, ರಾಯಚೂರು, ಶಿವಮೊಗ್ಗ, ಯಾದಗಿರಿ, ಹಾಸನ, ಕೊಪ್ಪಳ, ಹಾವೇರಿ, ಕೋಲಾರ, ರಾಮನಗರ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗೆ ಈ ಹೊಸ ಮಾರ್ಗಸೂಚಿ ಅನ್ವಯವಾಗಲಿವೆ.
ಈ ಜಿಲ್ಲೆಗಳಲ್ಲಿರುವ ವ್ಯಾಪಾರ, ವಹಿವಾಟಿಗೆ ಅವಕಾಶ ನೀಡಲಾಗುತ್ತಿದೆ. ಮಾರುಕಟ್ಟೆಯಲ್ಲಿರುವ ಕಾಂಪ್ಲೆಕ್ಸ್, ವಸತಿ ಸಮುಚ್ಚಯಗಳಲ್ಲಿರುವ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದು, ಶೇ. 50ರಷ್ಟು ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ನೀಡುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಇನ್ನು ಗ್ರೀನ್ ಜೋನ್ ನಲ್ಲಿರುವ ಮಾಲ್ ಗಳನ್ನು ತೆರೆಯುವಂತಿಲ್ಲ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸೂಚಿಸಲಾಗಿದೆ. ಈ ಹೊಸ ಮಾರ್ಗಸೂಚಿ ಮೇ.3ರವರೆಗೆ ಅನ್ವಯವಾಗಲಿದೆ. ವಿಶೇಷ ಆರ್ಥಿಕ ವಲಯ, ಕೈಗಾರಿಕಾ ವಲಯ, ಕೈಗಾರಿಕಾ ಟೌನ್ ಶಿಪ್, ರಫ್ತು ಆಧಾರಿತ ವಲಯಗಳಲ್ಲಿ ಕೆಲಸ ಮಾಡಲು ಕಾರ್ಮಿಕರಿಗೆ ಅವಕಾಶ ಮಾಡಿಕೊಡಬೇಕು. ಈ ಕಾರ್ಮಿಕರಿಗೆ ಕೆಲಸ ಮಾಡುವ ಸ್ಥಳದಲ್ಲೇ ತಂಗಲು ಅವಕಾಶ ಕಲ್ಪಿಸಬೇಕು. ಅಲ್ಲದೇ, ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸೂಚಿಸಲಾಗಿದೆ.