ಉಜಿರೆ: ಕೊರೊನಾ ನಿರ್ಮೂಲನೆಯೊಂದಿಗೆ ವಿಶ್ವಶಾಂತಿ ಮತ್ತು ಲೋಕ ಕಲ್ಯಾಣಕ್ಕಾಗಿ ಇಂದು, ಭಾನುವಾರ ರಾತ್ರಿ 9 ಗಂಟೆಗೆ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಜ್ಯೋತಿ ಬೆಳಗಿಸಿ ವಿಶೇಷ ಪ್ರಾರ್ಥನೆ ಮಾಡುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.
ಕೊರೊನಾ ನಿರ್ಮೂಲನೆಗಾಗಿ ನಾವೆಲ್ಲ ವಿಶ್ವದ ಎಲ್ಲಾ ಜನರೊಂದಿಗೆ ಏಕತೆ, ಸಂಘಟನೆ ಮತ್ತು ಪ್ರಜ್ಞೆಯೊಂದಿಗೆ ಹೋರಾಟ ನಡೆಸುತ್ತಿದ್ದೇವೆ.
ಪ್ರಧಾನಿಯವರ ಸಲಹೆಯಂತೆ ಎಲ್ಲರೂ ಭಾನುವಾರ ರಾತ್ರಿ 9 ಗಂಟೆಗೆ ತಮ್ಮ ಮನೆಯಲ್ಲಿ ಜ್ಯೋತಿ ಬೆಳಗಿಸಿ ಕೊರೊನಾ ನಿರ್ಮೂಲನೆಯೊಂದಿಗೆ ವಿಶ್ವದ ಎಲ್ಲಾ ಜನರ ನೆಮ್ಮದಿ ಮತ್ತು ಉಜ್ವಲ ಭವಿಷ್ಯದೊಂದಿಗೆ ಸುಖ-ಶಾಂತಿಗಾಗಿ ಪ್ರಾರ್ಥಿಸೋಣ. ಜ್ಯೋತಿಗೆ ಬಡವ-ಬಲ್ಲಿದ, ಮೇಲು-ಕೀಳು ಅಥವಾ ಪ್ರಾದೇಶಿಕ ಬೇಧ, ಇಲ್ಲ. ಇತರರ ಸಂತೋಷವನ್ನು ನಾವೆಲ್ಲರೂ ಹಂಚಿಕೊಂಡು ಅನುಭವಿಸೋಣ.
ಜ್ಯೋತಿ ಪ್ರತಿಯೊಬ್ಬರ ಮನದ ಹಾಗೂ ಮನೆಯ ಕತ್ತಲನ್ನು ಹೋಗಲಾಡಿಸಿ ವಿಶ್ವಶಾಂತಿಗೆ ಪ್ರೇರಕವಾಗಲಿ. ಕೊರೊನಾ ಸಂಪೂರ್ಣ ನಿರ್ಮೂಲನೆಯಾಗಲಿ ಎಂದು ಎಲ್ಲರೂ ಏಕಕಾಲದಲ್ಲಿ ಪ್ರಾರ್ಥಿಸೋಣ ಎಂದು ಹೆಗ್ಗಡೆಯವರು ಸಲಹೆ ನೀಡಿದ್ದಾರೆ.
ಎಲ್ಲರೂ ಪ್ರಧಾನಿಯವರ ಕರೆಯನ್ನು ಪ್ರೀತಿಯಿಂದ ಸ್ವಾಗತಿಸಿ ಅನುಷ್ಠಾನಗೊಳಿಸಿ ಆನಂದಿಸೋಣ. ಕೊರೊನಾ ಶೀಘ್ರ ನಿರ್ಮೂಲನೆಯಾಗಿ ವಿಶ್ವದೆಲ್ಲೆಡೆ ಸುಖ, ಶಾಂತಿ, ನೆಮ್ಮದಿ ನೆಲೆಸಲಿ ಎಂದು ಅವರು ಹಾರೈಸಿದ್ದಾರೆ.