ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಡುಪಿಯ ಉನ್ನತೀಕರಿಸಿದ ಅಕಾಡೆಮಿ ಮತ್ತು ವೃತ್ತಿ ಮಾರ್ಗದರ್ಶನ ಕೇಂದ್ರ, ವಾಣಿಜ್ಯ ಮತ್ತು ನಿರ್ವಹಣಾ ಸಂಘ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶಗಳ ಸಂಯುಕ್ತಾಶ್ರಮದಲ್ಲಿ ಔದ್ಯೋಗಿಕ ಸಬಲೀಕರಣ ಅವಕಾಶಗಳ ನವನವೀನ ಆಯಾಮಗಳು ಎಂಬ ವಿಷಯದ ಕುರಿತಂತೆ ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿ/ನಿಯರಿಗಾಗಿ ಸಂವಾದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದ ಮುಖ್ಯ ಸಂಪನ್ಮೂಲ ವ್ಯಕ್ತಿ ಸರಿತಾ, ಉದ್ಯೋಗ ಮಾರುಕಟ್ಟೆಯ ಆಶಾದಾಯಕ ಬೆಳವಣಿಗೆಗಳು, ಅವಕಾಶಗಳು ಮತ್ತು ವೃತ್ತಿಪರತೆಯ ವಿವಿಧ ಆಯಾಮಗಳ ಕುರಿತಂತೆ ಮನೋಜ್ಞವಾಗಿ ಸಂವಾದ ಮಂಡಿಸಿ, ವಿದ್ಯಾರ್ಥಿ/ನಿಯರ ಸವಾಲು-ಸಂದೇಹಗಳಿಗೆ ಪ್ರೇರಣಾತ್ಮಕ ಸಮಾಧಾನಗಳನ್ನು ಚರ್ಚಿಸಿದರು.
ಪ್ರೊ. ಹರಿಪ್ರಸಾದ್ ಬಿ.ಶೆಟ್ಟಿ ತಮ್ಮಅಧ್ಯಕ್ಷೀಯ ನುಡಿಗಳಲ್ಲಿ ಸ್ಪರ್ಧಾತ್ಮಕವಾದ ಔದ್ಯೋಗಿಕ ರಂಗದಲ್ಲಿನ ಯಶಸ್ಸಿಗೆ ವಿದ್ಯಾರ್ಥಿ/ನಿಯರಲ್ಲಿ ಆಸಕ್ತತೆ, ನಿರಂತರ ಪ್ರಯತ್ನ, ಅಧ್ಯಯನ ಮತ್ತು ಜ್ಞಾನ ಪ್ರಬುದ್ಧತೆಗಳನ್ನು ಸಾಧನಗಳಾಗಿ ಬಳಸಿಕೊಳ್ಳುವ ಚಾಕಚಕ್ಯತೆಯೇ ಮೂಲ ಬುನಾದಿ ಎಂದು ಹೇಳಿದರು. ಡಾ.ರವಿ.ಎಂ.ಎನ್., ಪ್ರೊ.ಚಂದ್ರಕಾಂತ ಶೆಣೈ ಮತ್ತು ಪ್ರೊ.ಅಶೋಕ ಕುಮಾರ ಬಾವಿಕಟ್ಟಿ ಉಪಸ್ಥಿತರಿದ್ದರು. ಅಂತಿಮ ಬಿಕಾಂ. ವಿದ್ಯಾರ್ಥಿನಿಯರಾದ ಸಂಧ್ಯಾ ಪ್ರಾರ್ಥಿಸಿ, ಭವ್ಯ ಕಾರ್ಯಕ್ರಮ ನಿರೂಪಿಸಿದರು.