ವಿಟ್ಲ: ಕೊರೊನಾ ವೈರಸ್ ಜಾಗೃತಿಗಾಗಿ ಮತ್ತು ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗೆ ಪ್ರವೇಶ ನಿಷೇಧಿಸಿದ ಹಿನ್ನೆಲೆಯಲ್ಲಿ ವಿಟ್ಲ ಠಾಣಾ ವ್ಯಾಪ್ತಿಯ ಎಲ್ಲಾ ಗಡಿ ಭಾಗದಲ್ಲಿ ಪೊಲೀಸ್ ಇಲಾಖೆ ಇಲಾಖೆ ನಾಕಾಬಂಧಿ ಅಳವಡಿಸಿ, ಚೆಕ್ ಪೋಸ್ಟ್ ಗಳನ್ನು ಬಂದ್ ಮಾಡಿದ್ದಾರೆ.
ವಿಟ್ಲ ಠಾಣಾ ವ್ಯಾಪ್ತಿಯ ಕರ್ನಾಟಕ- ಕೇರಳ ಗಡಿಭಾಗವಾದ ಸಾರಡ್ಕ, ಸಾಲೆತ್ತೂರು, ಪೆರುವಾಯಿ, ನೆಲ್ಲಿಕಟ್ಟೆ, ಆನೆಕಲ್ಲುಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಬಂಟ್ವಾಳ ಸರ್ಕಲ್ ವ್ಯಾಪ್ತಿಯಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಬೆಳಿಗ್ಗೆನಿಂದಲೇ ಪೊಲೀಸರು ಮಧ್ಯಾಹ್ನ 2 ಗಂಟೆ ಬಳಿಕ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಸೂಚನೆ ನೀಡಿದ್ದರು. ಬಳಿಕ ಎರಡು ಗಂಟೆಯಿಂದ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಮಾಹಿತಿ ಇಲ್ಲದ ಹಲವು ಮಂದಿ ಆಗಮಿಸಿ ಚೆಕ್ ಪೋಸ್ಟ್ ಗಳಲ್ಲಿ ಕಾಯುವಂತಾಯಿತು. ಇನ್ನೂ ಕೆಲವರು ಪೊಲೀಸರೊಂದಿಗೆ ವಾಗ್ವದಕ್ಕೆ ಇಳಿದಿದ್ದಾರೆ.
ವಿಟ್ಲ, ಪುತ್ತೂರು, ಮಂಗಳೂರು ಕಡೆಯಿಂದ ಕೇರಳದ ಉಪ್ಪಳ, ಪೆರ್ಲ, ಬದಿಯಡ್ಕ ಮೊದಲಾದ ಕಡೆಗಳಿಗೆ ತೆರಳುವ ಪ್ರಯಾಣಿಕರು ಹಾಗೂ ಸರಕು ಸಾಗಾಟದ ವಾಹನಗಳು ಅರ್ಧ ದಾರಿಯಲ್ಲಿ ನಿಲ್ಲುವಂತಾಯಿತು. ಇನ್ನೂ ಕೆಲವರು ಬಂದ ದಾರಿಯಲ್ಲಿಯೇ ಹಿಂತಿರುಗಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್. ಅವರು ಕೂಡ ಆಗಮಿಸಿ ಚೆಕ್ ಪೋಸ್ಟ್ ಗಳ ಪರಿಶೀಲನೆ ನಡೆಸಿದ್ದಾರೆ.