ಬಂಟ್ವಾಳ : ಕೊರೊನಾ ವೈರಸ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ಜನತಾ ಕರೆಯನ್ನು ಬೆಂಬಲಿಸಿ, ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ರವರ ಆದೇಶದಂತೆ ಸೂರಿಕುಮೇರಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ಸಂಪೂರ್ಣ ಸ್ಥಬ್ದಗೊಂಡಿದೆ. ಚರ್ಚ್ ಪ್ರವೇಶ ದ್ವಾರದಲ್ಲಿರುವ ಗೇಟನ್ನು ಮುಚ್ಚುವ ಮೂಲಕ ವಂದನೀಯ ಫಾದರ್ ಗ್ರೆಗರಿ ಪಿರೇರಾ, ಚರ್ಚ್ ಪಾಲನಾ ಸಮಿತಿ ಮತ್ತು ಸಮಸ್ತ ಕ್ರೈಸ್ತ ಬಾಂಧವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಸೂರಿಕುಮೇರು ಬೊರಿಮಾರ್ ಚರ್ಚ್ ನ 126 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಿವ್ಯ ಬಲಿಪೂಜೆಯು ನಡೆದಿರುವುದಿಲ್ಲ, ಅದೇ ರೀತಿ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವವರನ್ನು ಅಭಿನಂದಿಸಲು ಭಾನುವಾರ ಸಂಜೆ 5:00 ಗಂಟೆಗೆ ಸರಿಯಾಗಿ ಚರ್ಚ್ ಗಂಟೆಯನ್ನು ಬಾರಿಸಲಾಗುತ್ತದೆ ಮತ್ತು ಮಾರ್ಚ್ 31 ರ ತನಕ ಯಾವುದೇ ಕಾರ್ಯಕ್ರಮಗಳು, ಇತರ ಚಟುವಟಿಕೆಗಳು ಚರ್ಚ್ ಆವರಣದಲ್ಲಿ ನಡೆಯುವುದಿಲ್ಲ ಎಂದು ಫಾದರ್ ಗ್ರೆಗರಿ ಪಿರೇರಾರವರು ತಿಳಿಸಿದರು.