ವಿಟ್ಲ: ಕರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಕೇರಳ ಗಡಿಭಾಗವಾದ ಕನ್ಯಾನದಲ್ಲಿ ಅನಾವಶ್ಯಕವಾಗಿ ಸುತ್ತಾಡುತ್ತಿದ್ದ ವ್ಯಕ್ತಿಯನ್ನು ತಡೆದ ಸಂದರ್ಭ ಪೊಲೀಸ್ ಸಿಬ್ಬಂದಿಗಳನ್ನು ತಳ್ಳಿ ಗಾಯಗೊಳಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ವ್ಯಕ್ತಿಯೊಬ್ಬನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡ ಘಟನೆ ಸೋಮವಾರ ನಡೆದಿದೆ.
ಮುಚ್ಚಿರಪದವು ನಿವಾಸಿ ಸಿದ್ದಿಕ್ ಯಾನೆ ಅಬ್ಬೂಬಕರ್ ಸಿದ್ದಿಕ್ (೨೮) ಬಂಧಿತ ಆರೋಪಿಯಾಗಿದ್ದಾನೆ. ಕರೊನಾ ಹಿನ್ನಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಕನ್ಯಾನ ಪೇಟೆಯಲ್ಲಿ ಬಂದ್ ವಾತಾವರಣವಿತ್ತು. ಕನ್ಯಾನದ ಅಂಗಡಿಯೊಂದರ ಮುಂದೆ ನಿಂತ ಸಿದ್ದಿಕ್, ಪೊಲೀಸರ ಮುಂದೆ ಮೂರು ಮಂದಿ ದ್ವಿಚಕ್ರವಾಹನದಲ್ಲಿ ಹೋದರೂ ಮಾತನಾಡುತ್ತಿಲ್ಲ ಎಂದು ಹೇಳಿಕೊಂದು ಅವಾಚ್ಯವಾಗಿ ನಿಂದಿಸಿದ್ದಾನೆ. ಈ ಸಂದರ್ಭ ಪೊಲೀಸರು ಹಿಡಿಯಲು ಹೋದಾಗ ಪೊಲೀಸರನ್ನು ಹಳ್ಳಕ್ಕೆ ತಳ್ಳಿ ಗಾಯಗೊಳಿಸಿದ್ದಾನೆ.
ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಳ್ಳಕ್ಕೆ ತಳ್ಳಿ ತಪ್ಪಿಸಿಕೊಂಡಿದ್ದೂ ಅಲ್ಲದೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ವಿಚಾರದಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ.