


ವಿಟ್ಲ: ಸಾಲೆತ್ತೂರು ಗ್ರಾಮದ ಕಟ್ಟತ್ತಿಲದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಸ್ಸಯ್ಯಿದ್ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಮಖಾಂ ಉರೂಸ್ ಹಾಗೂ 9 ದಿನಗಳ ಧಾರ್ಮಿಕ ಮತ ಪ್ರಭಾಷಣ ಖಾಝಿ ಕೂರತ್ ತಂಙಳ್ ಮತ್ತು ಕಟ್ಟತ್ತಿಲ ಮುದರ್ರಿಸ್ ಇಬ್ರಾಹಿಂ ಫೈಝಿ ಪುಳಿಕ್ಕೂರು ಉಸ್ತಾದ್ ಅವರ ನೇತೃತ್ವದಲ್ಲಿ ಫೆ. 21ರಿಂದ ಮಾರ್ಚ್ 1 ವರೆಗೆ ನಡೆಯಲಿದ್ದು, ಮಾ. 1ರಂದು ಅನ್ನದಾನ ಹಾಗೂ ಹಗಲು ಉರೂಸ್ ನಡೆಯಲಿದೆ ಎಂದು ಕಟ್ಟತ್ತಿಲ ಜುಮಾ ಮಸೀದಿ ಕಾರ್ಯದರ್ಶಿ ಕೆ.ಎಂ ಮುಹಿಯ್ಯುದ್ದೀನ್ ಮದನಿ ತಿಳಿಸಿದರು.
ಅವರು ಬುಧವಾರ ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಫೆ.21ರಂದು ಮಧ್ಯಾಹ್ನ ಜಿಸಿಸಿ ವತಿಯಿಂದ ನಿರ್ಮಿಸಲಾದ ಪ್ರವಾಸಿ ಮಹಿಳೆಯರ ನಮಾಝ್ ಕೊಠಡಿಯ ಹಾಗೂ ಉರೂಸ್ ಸಮಾರಂಭದ ಉದ್ಘಾಟನೆ ನಡೆಯಲಿದೆ. ಕೂಟು ಝಿಯಾರತ್ ಮತ್ತು ಧ್ವಜಾರೋಹಣ ನಡೆಯಲಿದೆ. ಈ ಸಂದರ್ಭ ಉದ್ಯಾವರ ಹಾಮಿದ್ ತಂಙಳ್ ಮತ್ತು ಅಬ್ದುಲ್ ಹಮೀದ್ ತಂಙಳ್, ಜಿಲ್ಲಾ ಪಂಚಾಯಿತಿ ಸದಸ್ಯ ಎಂಎಸ್ ಮಹಮ್ಮದ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಮೊದಲಾದವರು ಭಾಗವಹಿಸಿಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರತಿದಿನ ಧಾರ್ಮಿಕ ಮತ ಪ್ರಭಾಷಣ ನಡೆಯಲಿದೆ. ನಾನಾ ದಿನಗಳಲ್ಲಿ ಬುರ್ದಾ ಮಜ್ಲೀಸ್, ಜಲಾಲಿಯ್ಯ ರಾತೀಬು, ಸ್ವಲಾತ್ ಮಜ್ಲೀಸ್, ಖತ್ಮುಲ್ ಖುರ್ಆನ್ ಮತ್ತು ಉಲಮಾ ಅನುಸ್ಮರಣೆ ಸಂಗಮ ನಡೆಯಲಿದೆ. ಮಾರ್ಚ್ ೧ರಂದು ನಡೆಯಲಿರುವ ಉರೂಸ್ ಹಾಗೂ ಸಾರ್ವಜನಿಕ ಅನ್ನದಾನದ ಪ್ರಯುಕ್ತ ಬೆಳಿಗ್ಗೆ ಸಂದಲ್ ಮೆರವಣಿಗೆ ಮಂಚಿಯಿಂದ ಕಟ್ಟತ್ತಿಲ ಮಖಾಂ ಶರೀಫಿಗೆ ಆಗಮಿಸಲಿದೆ. ಸಮಾರೋಪ ಹಾಗೂ ಉರೂಸ್ ಸಮಾರಂಭದಲ್ಲಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುವಾಃ ಆಶೀರ್ವಚನ ನೀಡಲಿದ್ದಾರೆ. ಮಹ್ಮೂದುಲ್ ಫೈಝಿ ವಾಲೆಮುಂಡೋವ್ ಉಸ್ತಾದ್ ಉದ್ಘಾಟಿಸಲಿದ್ದಾರೆ. ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಈ ಸಂದರ್ಭ ಮಂಚಿ ಉಸ್ತಾದ್, ಸಾಲೆತ್ತೂರು ಖತೀಬು ಅಬ್ದುಲ್ಲ ಮದನಿ, ಜಪ್ಪು ಮದನಿ, ತಲಕ್ಕಿ ಖತೀಬು ಝೈನಿ, ಕಣಚೂರು ಮೋನು, ನಡಿಬೈಲು ಇಬ್ರಾಹಿಂ ಹಾಜಿ, ಹರ್ಷದ್ ವರ್ಕಾಡಿ, ಎಚ್ ಎಚ್ ಹಸನ್ ಶಫೀಕ್, ಶರೀಫ್ ದೇರಳಕಟ್ಟೆ, ಎಮ್.ಬಿ ಸಖಾಫಿ, ಸುಲೈಮಾನ್ ಹಾಜಿ ನಾರ್ಶ, ಶರೀಫ್ ದೇರಳಕಟ್ಟೆ, ಮಹಮ್ಮದ್ ಹಾಜಿ ಗೋಳ್ತಮಜಲು, ಮುತ್ತಲಿಬ್ ಹಾಜಿ ನಾರ್ಶ, ಎಸ್ಕೆ ಖಾದರ್ ಹಾಜಿ, ಪಿ.ಬಿ ಅಬ್ದುಲ್ ಮಜೀದ್ ಸೇರಿದಂತೆ ಉಲಮಾ ಉಮರಾಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಸೀದಿ ಖತೀಬು ಇಬ್ರಾಹಿಂ ಫೈಝಿ ಪುಳಿಕ್ಕೂರು ಉಸ್ತಾದ್, ಅಧ್ಯಕ್ಷ ಕೆ.ಪಿ ಅಬ್ದುಲ್ ಖಾದರ್ ಕಟ್ಟತ್ತಿಲ, ಉರೂಸ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಪ್ರಧಾನ ಕಾರ್ಯದರ್ಶಿ ಎಸ್.ಎ ಸಿದ್ದೀಕ್ ಸಾಲೆತ್ತೂರು ಉಪಸ್ಥಿತರಿದ್ದರು.


