ಬಂಟ್ವಾಳ: ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿನ್ನೆ ಉದ್ಯೋಗ ಭರವಸೆ ಕೋಶ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ಸಂದರ್ಶನ ಕೌಶಲ್ಯಗಳು ಮತ್ತು ರೆಸ್ಯೂಮ್ ಬರವಣಿಗೆ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಪುಂಜಾಲಕಟ್ಟೆ ಸ.ಪ್ರ.ದ. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿಶಾಲ್ ಪಿಂಟೊ ಆಗಮಿಸಿ, ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಸಂದರ್ಶನ ಎದುರಿಸುವ ಕಲೆ, ಕೌಶಲ್ಯಗಳು ಹಾಗೂ ರೆಸ್ಯೂಮ್ ಬರವಣಿಗೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಹೆಚ್.ಕೆ ಅವರು ವಿದ್ಯಾರ್ಥಿಗಳಿಗೆ ಜಾಕ್ಮಾರಂತಹ ಮಹಾನ್ ವ್ಯಕಿಗಳ ಪ್ರೇರಣೆಯೊಂದಿಗೆ ಸೋಲಿಗೆ ಎದೆಗುಂದದೆ ಧೈರ್ಯದಿಂದ ಸಂದರ್ಶನಗಳನ್ನು ಎದುರಿಸಬೇಕೆಂದು ಹೇಳಿದರು.
ಉದ್ಯೋಗ ಭರವಸೆ ಕೋಶದ ಸಂಚಾಲಕ ಹನುಮಂತಯ್ಯ ಜಿ.ಹೆಚ್. ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ದೇವಿಪ್ರಸಾದ್ ಉಪಸ್ಥಿತರಿದ್ದರು. ತೃತೀಯ ಬಿಕಾಂ ವಿದ್ಯಾರ್ಥಿಗಳಾದ ರಂಜಿತ್ ಪ್ರಾರ್ಥನೆಯೊಂದಿಗೆ ಕಾರ್ಯಾಗಾರ ಪ್ರಾರಂಭಿಸಿ, ರಾಜೇಶ್ ಸ್ವಾಗತಿಸಿದರು. ಅಭಿಜಿತ್ ವಂದಿಸಿದರು. ಅರ್ಪಿತ ಕಾರ್ಯಕ್ರಮ ನಿರೂಪಿಸಿದರು.